ಹಾಸನ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ತಾವು ಚಿಕ್ಕಂದಿನಿಂದಲೂ ಸಿದ್ದರಾಮಯ್ಯನವರನ್ನು ನೋಡಿಕೊಂಡು ಬೆಳೆದವನು. ನಮ್ಮ ಕುಟುಂಬಕ್ಕೂ ಅವರಿಗೂ ಉತ್ತಮ ಒಡನಾಟವಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರ ಆಶೀರ್ವಾದ ಪಡೆದುಕೊಂಡಿದ್ದು, ಅವರನ್ನು ನನ್ನ ಪರ ಪ್ರಚಾರಕ್ಕೆ ಬರುವಂತೆ ಕೋರಿದ್ದೇನೆ. ಅವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ ಪ್ರಜ್ವಲ್ ರೇವಣ್ಣ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನೂ ನಾನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.