ಮಂಗಳೂರು, ಜು. 31: ಸೋಮವಾರ ಸಂಜೆ 7 ಗಂಟೆಗೆ ಸುಮಾರಿನ ಹೊತ್ತಿನಲ್ಲಿ ಸಿದ್ಧಾರ್ಥ್ ಅವರು ನೇತ್ರಾವತಿ ನದಿಯ ಸೇತುವೆಯ ಬಳಿ ನಾಪತ್ತೆಯಾಗಿದ್ದರು. ಸಿದ್ಧಾರ್ಥ ಅವರು ನಾಪತ್ತೆಯಾಗುವ ಮುನ್ನ ಬ್ಲೇಜರ್ ಸಮೇತ ಸಂಪೂರ್ಣ ಉಡುಗೆ ತೊಟ್ಟಿದ್ದರು. ಆದರೆ, ಅವರ ಕಳೇಬರದಲ್ಲಿ ಪ್ಯಾಂಟ್ ಮಾತ್ರ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಸ್.ಎಂ. ಕೃಷ್ಣ ಅಳಿಯ ಹಾಗೂ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ನೇತ್ರಾವತಿ ನದಿಯ ನೀರಿನಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದೆ. ಇಷ್ಟು ದೊಡ್ಡ ಸಾಮ್ರಾಜ್ಯದ ಸಾಮ್ರಾಟನ ಅಂತ್ಯ ಈ ರೀತಿ ಆಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ, ಈ ನಡುವೆ ಸಿದ್ಧಾರ್ಥ್ ಮೃತದೇಹದಲ್ಲಿ ಪ್ಯಾಂಟ್ ಮಾತ್ರ ಇರುವುದು, ಹಾಗೂ ಶರ್ಟ್ ಮತ್ತು ಬನಿಯನ್ ಕಾಣೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸಂದೇಹಗಳಿಗೆ ಆಸ್ಪದವಾಗಿದೆ.