ಸಾಲಮನ್ನಾ ವಿಳಂಬ-ಸಾಲ ಪಾವತಿಸುವಂತೆ ಬ್ಯಾಂಕ್ ನೋಟೀಸ್!

ಸಾಲಮನ್ನಾ ವಿಳಂಬ-ಸಾಲ ಪಾವತಿಸುವಂತೆ ಬ್ಯಾಂಕ್ ನೋಟೀಸ್!

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೋಸ್ತಿ ಸರ್ಕಾರದ ಮಹಾನ್ ಸಾಧನೆ ಎಂದು ಘೋಷಿಸಿದ ಬೆಳೆ ಸಾಲ ಮನ್ನಾ ಯೋಜನೆ ರೈತರಿಗೆ ಗಗನಕುಸುಮವಾಗಿದ್ದು,ಏಪ್ರಿಲ್ 15 ರೊಳಗೆ ಬೆಳೆ ಸಾಲ ಕಟ್ಟುವಂತೆ ಸಹಕಾರ ಬ್ಯಾಂಕ್​ಗಳು ರೈತರಿಗೆ ನೋಟಿಸ್ ಜಾರಿ ಮಾಡಿವೆ. ಬೆಳೆ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೂ ಅರ್ಹ ರೈತರ ಪಟ್ಟಿಯನ್ನು ಸಹಕಾರ ಸಂಘಗಳಿಗೆ ನೀಡದೇ ಇರುವುದರಿಂದ ಸಹಕಾರ ಬ್ಯಾಂಕ್​ಗಳಿಂದ ತೆಗೆದುಕೊಂಡ ಸಂಪೂರ್ಣ ಬೆಳೆ ಸಾಲವನ್ನು ತುಂಬುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ. ಸಹಕಾರ ಸಂಘಗಳಲ್ಲಿ 1 ಲಕ್ಷ ರೂಪಾಯಿ ಮನ್ನಾ ಯೋಜನೆಯ ಲಾಭ ರೈತರಿಗೆ ದೊರೆಯುವ ಸಂಬಂಧ ಸರ್ಕಾರದಿಂದ ಯಾವುದೇ ಆದೇಶ ಇದುವರೆಗೆ ಬಂದಿಲ್ಲ ಎಂದು ರೈತರಿಗೆ ನೋಟಿಸ್ ಜಾರಿ ಮಾಡಿದಸಹಕಾರ ಸಂಘಗಳ ನಿರ್ದೇಶಕರು ತಿಳಿಸಿದ್ದಾರೆ. ಸಂಪೂರ್ಣ ಬೆಳೆ ಸಾಲ ತುಂಬುವಂತೆ ಸಹಕಾರ ಸಂಘವು ರೈತರಿಗೆ ಜಾರಿ ಮಾಡಿದ ” ಸಾಲ ಪಾವತಿಯ ” ನೋಟಿಸ್ ಲಭ್ಯವಾಗಿದೆ.ಸಾಲ ಮನ್ನಾ ಕುರಿತು ಅದರಲ್ಲಿ ನೀಡಿದ ವಿಶೇಷ ಸೂಚನೆ ಹೀಗಿದೆ…

” ಘನ ರಾಜ್ಯ ಸರ್ಕಾರ 1 ಲಕ್ಷ ರೂ. ವರೆಗೆ ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಆದೇಶ ಮಾಡಿದೆ. ಸಾಲ ಮನ್ನಾಕ್ಕೆ ಸಂಬಂಧಿಸಿ ತಾವು ಕೊಟ್ಟ ಮಾಹಿತಿ ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ಆದರೆ ಸಾಲ ಮನ್ನಾಕ್ಕೆ ಅರ್ಹತೆ ಹೊಂದಿದ್ದರ ಬಗ್ಗೆ ಸರ್ಕಾರದಿಂದ ಈವರೆಗೆ ಯಾವುದೇ ಸದಸ್ಯರ ಅರ್ಹತಾ ಪಟ್ಟಿ ಸಂಘಕ್ಕೆ ಲಭ್ಯವಾಗದೇ ಇರುವುದರಿಂದ ದಿ : 15- 04- 2019 ರ ಒಳಗೆ ಬೆಳೆ ಸಾಲದ ಜೊತೆ ಮಾದ್ಯಮಿಕ ಸಾಲದ ಕಂತು ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿ,ಬಡ್ಡಿ ರಿಯಾಯತಿ ಸೌಲಭ್ಯ ಪಡೆಯಬೇಕಾಗಿ ವಿನಂತಿ. ಒಂದು ವೇಳೆ ದಿ : 15- 04- 2019 ರ ಒಳಗೆ ಬೆಳೆ ಸಾಲ ಮನ್ನಾ ಆದವರ ಬಗ್ಗೆ ಸರ್ಕಾರದಿಂದ ಅರ್ಹ ಸದಸ್ಯರ ಪಟ್ಟಿ ಲಭ್ಯ ಆದಲ್ಲಿ ಅಂತಹ ಸದಸ್ಯರು 1 ಲಕ್ಷ ರೂ.ವರೆಗೆ ಬೆಳೆ ಸಾಲ ಮನ್ನಾಕ್ಕೆ ಅರ್ಹತೆ ಹೊಂದಿರುತ್ತಾರೆ. 1 ಲಕ್ಷ ರೂ. ಮೇಲ್ಪಟ್ಟು ಬೆಳೆ ಸಾಲದ ರಖಂನ್ನು ದಿ: 15- 04- 2019 ರ ಒಳಗೆ ಮರು ಪಾವತಿ ಮಾಡದೇ ಇದ್ದಲ್ಲಿ ಸಾಲ ಮನ್ನಾ ಮತ್ತುಬಡ್ಡಿ ಮನ್ನಾ ಸೌಲಭ್ಯ ದಿಂದ ವಂಚಿತರಾಗಬಹುದೆಂದು ತಿಳಿಪಡಿಸುತ್ತೇವೆ.” ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾದ ಯೋಜನೆ ವ್ಯಾಪ್ತಿಗೆ ಒಳಪಡುವ ರೈತರ ಪಟ್ಟಿ ಸಿದ್ಧಪಡಿಸಿ ಸಂಬಂಧ ಪಟ್ಟ ಸಹಕಾರ ಬ್ಯಾಂಕ್​ಗಳಿಗೆ ಇದುವರೆಗೂ ನೀಡದೇ ಇರುವುದರಿಂದ ಬೆಳೆ ಸಾಲ ಕಟ್ಟುವಂತೆ ನೋಟಿಸ್​ನಲ್ಲಿ ಸ್ಪಷ್ಟಪಡಿಸಲಾಗಿದೆ. ಕೃಷಿ ಸಹಕಾರ ಬ್ಯಾಂಕ್​ಗಳಲ್ಲಿನ ರೈತರ1 ಲಕ್ಷ ರೂಪಾಯಿ ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದುಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೂ ಅದರ ಲಾಭ ಈಗ ರೈತರಿಗೆ ದೊರೆಯದಂತಾಗಿದೆ. ರೈತರು ಸಹಕಾರ ಬ್ಯಾಂಕ್​ಗಳ ನೋಟಿಸ್​​ನಿಂದ ಗೊಂದಲಕ್ಕೊಳಗಾಗಿದ್ದು ಸಾಲ ಕಟ್ಟಬೇಕೆ… ಬೇಡವೆ ಎನ್ನುವುದು ತಿಳಿಯದಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಡಬೇಕಾದ ದೋಸ್ತಿ ಸರ್ಕಾರ ಮತ್ತು ಅಧಿಕಾರಗಳು ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿ ಮುಳುಗಿರುವುದರಿಂದ ರೈತರಿಗೆ ದಿಕ್ಕುತೋಚದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos