ಬೆಂಗಳೂರು: “ಚಾಯ್ ವಾಲಾ, ಚೌಕಿದಾರ್ ಚೋರ್, ಮೋದಿಗೆ ಪರಿವಾರ ಇಲ್ಲ ಅಂದರು. ನಾವು ಕೂಡ ಅದನ್ನು ಅಸ್ತ್ರ ಮಾಡಿಕೊಂಡಿದ್ದೇವೆ. ಶಿವರಾಜ್ ತಂಗಡಗಿ ಈ ಹಿಂದೆ ಬಿಜೆಪಿಯಲ್ಲಿದ್ದಾಗ ಸೋನಿಯಾ ಗಾಂಧಿ ಅವರಿಗೆ ಬೈಯ್ಯುತ್ತಿದ್ದರು. ಈಗ ಮೋದಿ ಅವರಿಗೆ ಅನ್ನುತ್ತಿದ್ದಾರೆ. ಕರ್ನಾಟಕ ಜನತೆಗೆ ಸಂಸ್ಕೃತ ಹೇಳಬೇಕಾದವರೂ, ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ಸರ್ಕಾರವೇ ಸಂಸ್ಕಾರ ಇಲ್ಲದ, ಹೊಲಸು ಪದ ಉಪಯೋಗ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು”.
ಪ್ರಧಾನಿ ಮೋದಿಯವರ ಬಗ್ಗೆ ಕಾಂಗ್ರೆಸ್ ನಾಯಕರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದರು.
ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನ ಎಲ್ಲ ನಾಯಕರಿಗೆ ಕೋರ್ಟ್ ತಪರಾಕಿ ಹಾಕಿದೆ. ರಾಹುಲ್ ಗಾಂಧಿ ಸೇರಿ ಹಲವರಿಗೆ ಕೋರ್ಟ್ ಬಿಸಿ ಮುಟ್ಟಿಸಿದೆ. ಶಿವರಾಜ್ ತಂಗಡಗಿ ಕೂಡ ನಾಲಿಗೆ ಹರಿಬಿಟ್ಟಿದ್ದಾರೆ. ಸೋಲಿನ ಭಯದಿಂದ ಈ ರೀತಿ ಮಾತಾಡುತ್ತಿದ್ದಾರೆ. ಸಂಸ್ಕೃತಿ ಇಲ್ಲದ ಸಚಿವರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.