ನಾನು ಆರ್​ಸಿಬಿಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದು

ನಾನು ಆರ್​ಸಿಬಿಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದು

ಬೆಂಗಳೂರು: ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿಯೇ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು. ಮೇಕೆದಾಟು ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಫೋಟೋಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳದಿ ಜರ್ಸಿ ಹಾಕಿಸಿ ವ್ಯಂಗ್ಯಮಾಡಿದ ಬಿಜೆಪಿ ಟ್ವೀಟ್​ಗೆ ಸಿಎಂ ತಿರುಗೇಟು ನೀಡಿದ್ದಾರೆ.

ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಮೊಕದ್ದಮೆ ದಾಖಲಿಸಿದವರು ನೀವೇ. ಕಾವೇರಿ ನೀರು ಹಂಚಿಕೆಯಲ್ಲಿ ನಾಡಿಗೆ ಅನ್ಯಾಯ ಆಗುತ್ತಿದ್ದಾಗ ಹಲವು ಬಾರಿ ಮನವಿ ಮಾಡಿದರೂ ಮಧ್ಯಪ್ರವೇಶಿಸದೆ ಕನ್ನಡಿಗರನ್ನು ಸಂಕಷ್ಟಕ್ಕೆ ತಳ್ಳಿದವರು ನಿಮ್ಮದೇ ಪ್ರಧಾನಿ ಎಂದು ಸಿಎಂ ಟೀಕಿಸಿದ್ದಾರೆ.

ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ನಾಳೆಯಿಂದಲೇ ಅಣೆಕಟ್ಟು ಕೆಲಸ ಆರಂಭ ಮಾಡಲು ನಾವು ತಯಾರಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದನ್ನು ನಿಲ್ಲಿಸಿ ಎಂದು ಸಿದ್ದರಾಮಯ್ಯ ಬಿಜೆಪಿಗೆ ತಿವಿದಿದ್ದಾರೆ.

ನನ್ನ ಭಾವಚಿತ್ರಕ್ಕೆ ಹಳದಿ ಬಣ್ಣದ ಜೆರ್ಸಿ ಹಾಕಿ ನನ್ನ ಬದ್ಧತೆಯನ್ನು ಅವಮಾನಿಸಬೇಡಿ. ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿ ಯ ಹೆಮ್ಮೆಯ ಅಭಿಮಾನಿಯೇ ಎಂದು ತಿರುಗೇಟು ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos