ಆನೇಕಲ್:ಖಾಸಗಿ ಶಾಲಾ ಶಿಕ್ಷಕರು ಹಾಗೂ ಖಾಸಗಿ ಕಾಲೇಜು ಪ್ರಾಧ್ಯಾಪಕರು ಆರು ತಿಂಗಳಿಂದ ಶಾಲೆಗಳಲ್ಲಿ ಸಂಬಳ ನೀಡುತ್ತಿಲ್ಲ ಜೀವನ ನಡೆಸುವುದು ಕಷ್ಟವಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ ಆದ್ದರಿಂದ ಇತರರಿಗೆ ಸಹಾಯ ಹಸ್ತ ನೀಡಿದ ಹಾಗೆ ಸರ್ಕಾರ ನಮಗೂ ಸಹ ಜೀವನ ನಡೆಸಲು ಸಣ್ಣ ಪ್ರಮಾಣದ ಸಹಾಯ ಹಸ್ತವನ್ನು ನೀಡಬೇಕು ಎಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೆಲ ಶಿಕ್ಷಕರು ಮಾತನಾಡಿ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನೇಕ ಶಿಕ್ಷಕರನ್ನು ಲಾಕ್ಡೌನ್ ಪ್ರಾರಂಭದಲ್ಲಿಯೇ ಕೆಲಸದಿಂದ ತೆಗೆದಿದ್ದಾರೆ. ಇನ್ನು ಕೆಲವು ಶಾಲೆಗಳು ಒಂದೆರಡು ತಿಂಗಳು ಸಂಬಳವನ್ನು ನೀಡಿದ್ದಾದರೂ ಈಗ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಕೆಲವು ಶಾಲೆಗಳು ಸಂಬಳದ ಅರ್ಧ ಭಾಗವನ್ನು ನೀಡುತ್ತಿದ್ದಾರೆ. ಕೆಲವು ಖಾಸಗಿ ಶಾಲೆಗಳು ಶಿಕ್ಷಕರನ್ನು ಬಹಳ ಹಿನಾಯವಾಗಿ ನೋಡುತ್ತೇವೆ. ನೀವು ಶಾಲೆಯನ್ನು ಬಿಟ್ಟು ಕೂಲಿ-ನಾಲಿ ಮಾಡಿ ಜೀವನ ಸಾಗಿಸಿ ನಮ್ಮ ಶಾಲೆಗೆ ಬರುವುದು ಬೇಡ ಎಂದು ಹೇಳುತ್ತಿದ್ದಾರೆ.
ಶಿಕ್ಷಕರು ಗಾರೆ ಕೆಲಸ, ತೋಟದ ಕೂಲಿ ಕಾರ್ಮಿಕರು, ತರಕಾರಿ ಮಾರಾಟ, ಬೀದಿ ಬದಿಯಲ್ಲಿ ಹಣ್ಣು ಮಾರಾಟ ಮತ್ತಿತರ ಕೆಲಸಗಳನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಬಂದಾಗ ಮರೆಯಾಗುವುದು, ತಲೆಬಗ್ಗಿಸಿ ಕೊಳ್ಳುವಂತಹ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಮನೆಗಳಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದು ಮನೆಯಲ್ಲಿ ಅನಾರೋಗ್ಯದ ಸ್ಥಿತಿ ಬಂದಾಗಂತೂ ನರಕದ ಸ್ಥಿತಿಯನ್ನು ಕಾಣುತ್ತಿದ್ದೇವೆ. ಆದ್ದರಿಂದ ಸರಕಾರ ಇತರರಿಗೆ ಸಹಾಯ ನೀಡಿದಂತೆ ನಮಗೂ ಸಹ ಸಹಾಯ ಹಸ್ತವನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ವಕೀಲ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ ಈಗಿನ ಶಿಕ್ಷಣ ಮಂತ್ರಿಗಳು ಬೆಳಗ್ಗೆ ಒಂದು ಮಾತನಾಡಿದರೆ ಸಂಜೆ ಇನ್ನೊಂದು ಮಾತನಾಡುತ್ತಾರೆ. ಒಂದು ಬಾರಿ ಖಾಸಗಿ ಶಾಲೆಯ ವರಿಗೂ ಸಹಾಯ ಮಾಡುತ್ತೇವೆ ಎಂದು ಹೇಳುತ್ತಾರೆ. ಇನ್ನೊಂದು ಬಾರಿ ಸರ್ಕಾರದಲ್ಲಿ ಹಣ ಇಲ್ಲವೆಂದು ಹೇಳುತ್ತಾರೆ. ಹೀಗಾಗಿ ದೇವೇಗೌಡರು ಹಾಗೂ ನಾವು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಎಲ್ಲವನ್ನು ಚರ್ಚಿಸಿ ಸಹಾಯ ಹಸ್ತವನ್ನು ನೀಡಬೇಕೆಂದು ಮನವಿಯನ್ನು ಮಾಡಿದ್ದೇವೆ. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ದೇವೇಗೌಡರೊಂದಿಗೆ ಜೆಡಿಎಸ್ ಕಾರ್ಯಕರ್ತರು ಖಾಸಗಿ ಶಾಲೆಯ ಶಿಕ್ಷಕರು ಒಟ್ಟಿಗೆ ಸೇರಿ ಮುಖ್ಯಮಂತ್ರಿಗಳ ಮನೆಯ ಮುಂದೆ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಇದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಎಚ್ಚರಿಸಿದರು