ಬೆಂಗಳೂರು, ಜು. 17 : “ಮೈತ್ರಿ ಸರ್ಕಾರದ ಈ ಅಧೋಗತಿಗೆ ನಾನು ಕಾರಣ ಎಂದು ಹೇಳಲಾಗುತ್ತಿದೆ. ನನ್ನಿಂದ ಯಾವುದೇ ಶಾಸಕರಿಗೂ ತೊಂದರೆ ಆಗಿಲ್ಲ. ನನ್ನ ಇಲಾಖೆ ವ್ಯಾಪ್ತಿಗೆ ಬರುವ ಕ್ಷೇತ್ರ ಹೊರತುಪಡಿಸಿ ಇನ್ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಯಾರಿಗಾದರೂ ನನ್ನಿಂದ ನೋವಾಗಿದ್ದರೆ, ಈಗಲೇ ಕ್ಷಮೆ ಕೇಳುತ್ತೇನೆ” ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣನವರು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜತೆಗೆ ಮಾತಾಡಿದ ಸಚಿವ ಎಚ್.ಡಿ ರೇವಣ್ಣ, “ನಿಂಬೆಹಣ್ಣು ನನ್ನ ಬಳಿ ಇಲ್ಲ. ನಾನೇಕೆ ನಿಂಬೆಹಣ್ಣು ಇಟ್ಟುಕೊಳ್ಳಲಿ. ದೇವಿ ಆಶೀರ್ವಾದ ಇರೋವಾಗ ನಿಂಬೆ ಯಾಕೇಬೇಕು. ನನ್ನ ಮನೆ ದೇವರು ಈಶ್ವರನ ಕೃಪೆ ಇದೆ. ನನ್ನ ಮೇಲೆ ತಂದೆ ತಾಯಿಯ ಕೃಪೆ ಇದೆ. ಶಾಸಕರ ಮನವೊಲಿಕೆ ಸಿಎಂ ಕುಮಾರಣ್ಣ ಮಾಡ್ತಾರೆ. ನನಗೆ ಮಂತ್ರಿ ಸ್ಥಾನವೇ ಸಾಕಾಗೋಗಿದೆ. ನಾನು ಇನ್ನೇನು ಮಾಡಲು” ಸಾಧ್ಯ ಎಂದರು.
ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ರೇವಣ್ಣ ಹೊಡೆದಾಡ್ತಾರೆ ಅನ್ನೋದು ಕನಸು. ಹೀಗೆಂದು ಯಾರಾದ್ರೂ ತಿಳ್ಕೊಂಡಿದ್ರೆ ಅದು ಅವರ ದಡ್ಡತನ. ತಂದೆ ಇರೋವರೆಗೆ ಅದು ಅವರ ಕನಸಷ್ಟೇ. ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಒಡಕಿಲ್ಲ ಎಂದು ಕುಟುಕಿದರು.