ಮುಂಬೈ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಬಾಲಕನೊಬ್ಬನ ಸಾವಿಗೆ ಕಾರಣವಾದ ಮೇಕೆಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವಿಕ್ರೋಲಿಯ ಇಸ್ಲಾಂಪುರದಲ್ಲಿ ಆರನೇ ತರಗತಿ ಓದುತ್ತಿರುವ ಬಾಲಕ ಮೇಕೆ ದಾಳಿಗೆ ಸಾವನ್ನಪ್ಪಿದ್ದ. ಘಟನೆ ಮೇ 1 ರಂದು ನಡೆದಿತ್ತು. 13 ವರ್ಷದ ಬಾಲಕ ಸರ್ತಾಜ್ ಲಿಯಾಕತ್ ಸ್ನೇಹಿತರ ಜೊತೆ ಆಟವಾಡ್ತಿದ್ದ ಎನ್ನಲಾಗಿದೆ.ಈ ವೇಳೆ ಮೇಕೆಯೊಂದು ಆತನ ಮೇಲೆ ದಾಳಿ ಮಾಡಿತ್ತು. ಸರ್ತಾಜ್ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನಡೆಯುತ್ತಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಪೊಲೀಸರು ಬಾಲಕನ ಸಾವನ್ನು ಆಕಸ್ಮಿಕ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮೇಕೆ ಮಾಲೀಕನ ವಿರುದ್ಧ ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಹಿಂದೆ ಕೂಡ ಮೇಕೆ ದಾಳಿಗೆ ಮಕ್ಕಳು ಗಾಯಗೊಂಡಿದ್ದರಂತೆ. ಮೇಕೆ ಮಾಲೀಕನ ವಿರುದ್ಧ ತನಿಖೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದ ಹಳ್ಳಿಯಲ್ಲಿ ಬಾಲಕ ಶಿಕ್ಷಣ ಪಡೆಯುತ್ತಿದ್ದನಂತೆ. ಬೇಸಿಗೆ ರಜೆಗಾಗಿ ಮುಂಬೈಗೆ ಬಂದಿದ್ದ ಎನ್ನಲಾಗಿದೆ.