ವಿಜಯಪುರ, ನ. 12 : ಉಪಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆ ಗಮನಿಸಿದರೆ, ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದವಾಗಿರುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದ ಪತನದ ಬಳಿಕ ಸಿದ್ದರಾಮಯ್ಯ ಮೇಲೆ ದೇವೇಗೌಡರ ಅಭಿಪ್ರಾಯ ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೋಮುವಾದಿ ಪಕ್ಷವನ್ನು ದೂರವಿಡುವ ಉದ್ದೇಶದಿಂದ ಹೈಕಮಾಂಡ್ ನಿರ್ದೇಶನದಂತೆ ಜೆಡಿಎಸ್ ಜೊತೆ ಸರ್ಕಾರ ರಚನೆ ಮಾಡಿದೆವು. ಹೈ ಕಮಾಂಡ್ ಜೊತೆ ದೇವೇಗೌಡರು ಚರ್ಚಿಸುವಾಗಲೂ ನಾನಿರಲಿಲ್ಲ. ಸದ್ಯ ಬಿಜೆಪಿ ಬಗ್ಗೆ ಅವರು ಮೃದು ಧೋರಣೆ ತಾಳಿದ್ದಾರೆ.
ಉಪಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂಬ ಮಾತುಗಳನ್ನು ಆಡಿಲ್ಲ, ಆದರೆ, 12 ಸ್ಥಾನಗಳಲ್ಲಿ ನಮ್ಮ ಗೆಲುವು ಖಚಿತ, 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎಂದರು.