ಕೋಲಾರ: ಜಿಲ್ಲೆಯಲ್ಲಿ 41,794 ಪ್ರಕರಣಗಳಲ್ಲಿ 28,482 ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ರಾಜಿ ಮಾಡಿಸಲು ಗುರುತಿಸಲಾಗಿದೆ. ಅದರಲ್ಲಿ ಸುಮಾರು 4,500 ಪ್ರಕರಣಗಳು ಲೋಕ್ ಅದಾಲತ್ನಲ್ಲಿ ಇತ್ಯರ್ಥವಾಗಿದ್ದು, ಜಿಲ್ಲೆಯಲ್ಲಿ ಲೋಕ್ ಅದಾಲತ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಘುನಾಥ್ ಎಂ.ಎಲ್. ತಿಳಿಸಿದರು.
ಇಂದು ನಗರದ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 400 ಸಿವಿಲ್ ಪ್ರಕರಣಗಳು, 500 ಕ್ರಿಮಿನಲ್ ಪ್ರಕರಣಗಳು ಹಾಗೂ 40 ಮೋಟಾರು ಪ್ರಕರಣಗಳಲ್ಲಿ 1 ಕೋಟಿ 17 ಲಕ್ಷ ರೂ.ಗಳನ್ನು ವಿಮಾ ಕಂಪನಿಗಳಿಂದ ಕೊಡಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.
ರಸ್ತೆ ಉಲ್ಲಂಘನೆ ಪೊಲೀಸ್ ಕಾಯ್ದೆ ಅಡಿ ಬರುವ ಸಣ್ಣ ಪುಟ್ಟ 2800 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಹಣ ವಸೂಲಿ, ಬ್ಯಾಂಕ್ ಪ್ರಕರಣಗಳು, ವಿದ್ಯುತ್ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಅಮೂಲ್ಜಾರಿ ಪ್ರಕರಣಗಳು ಹಾಗೂ 50 ಮರಳು ದಂಧೆ ಪ್ರಕರಣಗಳಲ್ಲಿ 33 ಲಕ್ಷ ರೂ.ಗಳನ್ನು ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ವಕೀಲರ ಸಂಘ, ತಾಲ್ಲೂಕುಗಳ ವಕೀಲರ ಸಂಘ, ಭೂ ಗಣಿ ಇಲಾಖೆ, ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಕಂಪನಿಯ ವಕೀಲರು, ತಾಲ್ಲೂಕಿನ ಎಲ್ಲಾ ನ್ಯಾಯಾಧೀಶರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.