ಮುಂಬೈ, ಮಾ, 27, ನ್ಯೂಸ್ ಎಕ್ಸ್ ಪ್ರೆಸ್: ಕಳ್ಳತನ ನಡೆಸಲು ಹೊಂಚು ಹಾಕುತ್ತಿದ್ದಾನೆಂಬ ಶಂಕೆಯಲ್ಲಿ ಗುಂಪೊಂದು ಆಟೋ ರಿಕ್ಷಾ ಚಾಲಕನೊಬ್ಬನನ್ನು ವಸಾಯಿ ಪ್ರದೇಶದಲ್ಲಿ ಕಳೆದ ಶನಿವಾರ ಥಳಿಸಿದ್ದು, ಚಾಲಕ ಸೋಮವಾರ ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಘಟನೆ ಪೂರ್ವ ವಸಾಯಿ ಪ್ರದೇಶದ ಆಶಾ ನಗರ್ ಎಂಬಲ್ಲಿ ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ನಡೆದಿತ್ತು.
ಚಾಲಕ ನಸೀಮ್ ಶೇಖ್ ಎಂಬಾತ ರಸ್ತೆ ಬದಿ ನಿಂತಿದ್ದ ವೇಳೆ ಅತ ಕಳ್ಳತನಕ್ಕಾಗಿ ಹೊಂಚು ಹಾಕುತ್ತಿದ್ದಾನೆಂದು ಶಂಕಿಸಿದ ದುಷ್ಕರ್ಮಿಗಳು ಆತನಿಗೆ ಥಳಿಸಿದ್ದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಚಾಲಕನನ್ನು ನೋಡಿದ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಶೇಖ್ ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಘಟನೆಯ ವೀಡಿಯೊ ಕೂಡ ಪೊಲೀಸರ ಕೈಗೆ ಸಿಕ್ಕಿದೆ. ಬಂಧಿತರನ್ನು ರಾಮಬಾಬು ಸಾಹ್ನಿ ಹಾಗೂ ಅರವಿಂದ್ ವಸೋಯ ಎಂದು ಗುರುತಿಸಲಾಗಿದೆ. ಇತರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.