ಬೆಂಗಳೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಭದ್ರತೆಯ ದೃಷ್ಟಿಯಿಂದ ಸಿಂಗಾಪುರಕ್ಕೆ ಹೊರಡುವ ವಿಮಾನ ಪ್ರಯಾಣ ವಿಳಂಬವಾದ್ದರಿಂದ ಸಿಂಗಾಪುರದ ನೂರಾರು ಪ್ರಯಾಣಿಕರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಗಂಟೆಗಟ್ಟಲೆ ಕಳೆಯಬೇಕಾಯಿತು. ಫ್ಲೈಟ್ ಟಿಆರ್573ನಲ್ಲಿ 173 ಪ್ರಯಾಣಿಕರು ಮಂಗಳವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ತೆರಳಲಿದ್ದರು.
ಆದರೆ ಅಷ್ಟರಲ್ಲಿ ಕಿಡಿಗೇಡಿಯೊಬ್ಬ ಭದ್ರತೆಗೆ ಆತಂಕ ತಂದೊಡ್ಡುವ ವಿಷಯವೊಂದನ್ನು ಹರಿಬಿಟ್ಟಿದ್ದರಿಂದ ವಿಮಾನದ ಹಾರಾಟ ತಡವಾಗಿ ಆರಂಭಿಸಬೇಕಾಯಿತು. ವಿದೇಶಿಯನೊಬ್ಬ ಗಿಟಾರ್ ಬ್ಯಾಗ್ ನಲ್ಲಿ ಮಷಿನ್ ಗನ್ ಸಾಗಿಸಲಾಗುತ್ತಿದೆ ಎಂದಿದ್ದನ್ನು ಕೇಳಿಸಿಕೊಂಡ ಭದ್ರತಾ ಸಿಬ್ಬಂದಿ, ಎಲ್ಲ ಪ್ರಯಾಣಿಕರನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಿದೆ. ಇದರಿಂದಾಗಿ ತಡರಾತ್ರಿ 2.30ಕ್ಕೆ ಹೊರಡಬೇಕಿದ್ದ ವಿಮಾನ 10 ಗಂಟೆಗಳಷ್ಟು ತಡವಾಗಿ ಹೊರಡಬೇಕಾಯಿತು.