ಬೆಂಗಳೂರು, ಅ. 23 : ದೀಪಾವಳಿ ಹಿನ್ನಲೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ಹಾನಿಯಾದರೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾದೆ. ಇದನ್ನು ಅರಿತ ವಿಂಟೋ ಆಸ್ಪತ್ರೆ 24 ಗಂಟೆ ಕಾರ್ಯ ನಿರ್ವಹಿಸಲು ಬೇಕಾದ ಸಿದ್ಧತೆಗಳನ್ನು ಕೈಗೊಳ್ಳುವುದಾಗಿ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಸಂದರ್ಭದಲ್ಲಿ 50ರಿಂದ 60 ಜನರು ಕಣ್ಣಿನ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ರಾಜ್ಯದ ಕಣ್ಣಾಸ್ಪತ್ರೆಗಳಲ್ಲೂ ದಾಖಲಾಗುತ್ತಾರೆ. ಕಣ್ಣಿಗೆ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ 14 ವರ್ಷದೊಳಗಿನ ಮಕ್ಕಳೇ ಶೇ.40ರಷ್ಟಿರುತ್ತಾರೆ. ಅದರಲ್ಲೂ ಗಂಡುಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ. ನೇತ್ರ ಚಿಕಿತ್ಸಾ ಸಂಸ್ಥೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗಳಾದಾಗ ಅಂಥವರಿಗೆ ತುರ್ತು ಸೇವೆಯ ಅಗತ್ಯವಿರುತ್ತದೆ.