ವೆಲ್ಲಿಂಗ್ಟನ್, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದಲ್ಲಿ ಶುಕ್ರವಾರ ಬೆಳಗ್ಗೆ ಉಗ್ರರು ನಡೆಸಿದ ಶೌಟೌಟ್ ಗೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಕ್ರಿಕೆಟಿಗರು ಕೂಡ ಘಟನೆಯನ್ನು ಖಂಡಿಸಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಗ್ರರ ಅಟ್ಟಹಾಸಕ್ಕೆ ಮಸೀದಿಯಲ್ಲಿ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಮೃತಪಟ್ಟವರಿಗೆ ಟೀಂ ಇಂಡಿಯಾದ ಕ್ರಿಕೆಟರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್ ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.
ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, ಈ ಘಟನೆಯಿಂದ ನನಗೆ ಶಾಕ್ ಆಯ್ತು, ಕ್ರೈಸ್ಟ್ ಚರ್ಚ್ ನಲ್ಲಿ ದಾಳಿ ಕೇಳಿ ಒಂದು ಕ್ಷಣ ಹೃದಯ ಝಲ್ ಎಂದಿತು. ದೇವರ ದಯೆಯಿಂದ ಬಾಂಗ್ಲಾದೇಶ ತಂಡ ಘಟನೆಯಿಂದ ಪಾರಾಗಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ನನಗೆ ಅತ್ಯಂತ ಇಷ್ಟವಾದ ದೇಶದಲ್ಲೊಂದು ನ್ಯೂಜಿಲೆಂಡ್. ಈ ದೇಶದಲ್ಲಿ ದಾಳಿ ನಡೆದಿರುವುದರಿಂದ ನನಗೆ ತುಂಬಾ ನೋವಾಗಿದೆ ಎಂದು ಇರ್ಪಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.