ಚೆನ್ನೈ, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸಿದರೆ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಜಯಗಳಿಸಿದರೆ ಭ್ರಷ್ಟಾಚಾರ ರಹಿತ ಆಡಳಿತ, ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ‘ಮಕ್ಕಳ್ ನೀದಿ ಮೈಯಂ'(ಎಂಎನ್ಎಸ್) ಪಕ್ಷದ ಸ್ಥಾಪಕ ಕಮಲ್ ಹಾಸನ್ ಭರವಸೆ ನೀಡಿದ್ದಾರೆ.
ಚೆನ್ನೈ ದಕ್ಷಿಣ ಕ್ಷೇತ್ರ ಅಭ್ಯರ್ಥಿ ರಂಗರಾಜನ್ ಪರವಾಗಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಇವರು(ರಂಗರಾಜನ್) ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಒಂದು ವೇಳೆ ಎಂಎನ್ಎಸ್ ಜಯಗಳಿಸಿದರೆ, ಐದು ವರ್ಷಗಳ ವರೆಗೆ ಉಚಿತವಾಗಿ ಕುಡಿಯುವ ನೀರು ಹರಿಸಲಾಗುವುದು. ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳುವಿರಿ. ಪ್ರವಾಹ ಸಂದರ್ಭಗಳಲ್ಲಿ ಜಲಸಂಪನ್ಮೂಲವು ವ್ಯರ್ಥವಾಗದಂತೆ ಸಂರಕ್ಷಿಸಲಾಗುವುದು’ ಎಂದು ಹೇಳಿದರು.