ಇಂದೋರ್, ಏ. 24, ನ್ಯೂಸ್ ಎಕ್ಸ್ ಪ್ರೆಸ್ : ಕಳ್ಳತನ ಆರೋಪಿಯನ್ನ ವಿಚಾರಣೆ ನಡೆಸುವ ವೇಳೆಯೇ ಆತ ಕುಸಿದುಬಿದ್ದು ಸಾವನ್ನಪ್ಪಿರೋ ಘಟನೆ ಮಧ್ಯಪ್ರದೇಶದ ಇಂದೋರ್ನ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರು ತಾಯಿ ಹಾಗೂ ಮಗನನ್ನೂ ಪೊಲೀಸ್ ಠಾಣೆಗೆ ಕರೆತಂದಿದ್ದರು. ಕಳ್ಳತನ ಆರೋಪಿಗಳನ್ನ ಬಾಯಿಬಿಡಿಸುವಾಗ ಆರೋಪಿ ಇದ್ದಕ್ಕಿದ್ದಂತೆಯೇ ಅಸ್ವಸ್ಥನಾದ. ಲೋ ಬಿಪಿ ಕಾರಣ ಕುಸಿದಿದ್ದ, ಕೂಡಲೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕಳ್ಳತನದ ಆರೋಪಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದೇ ಪ್ರಕರಣದಲ್ಲಿ ಮೃತನ ತಾಯಿಯನ್ನೂ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಗಾಯಗೊಂಡಿರೋ ಆಕೆಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯೊಬ್ಬ ವಿಚಾರಣೆ ವೇಳೆ ಕುಸಿದುಬಿದ್ದು ಸಾವನ್ನಪ್ಪಿರೋದು ಮತ್ತು ಆತನ ತಾಯಿ ಹಾಗೂ ಆರೋಪಿ ಮಹಿಳೆಗೆ ಹಲ್ಲೆ ಮಾಡಿರೋ ಕಾರಣ ಠಾಣಾಧಿಕಾರಿಯನ್ನ ಮೇಲಾಧಿಕಾರಿಗಳು ಅಮಾನತು ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲೂ ಆದೇಶಿಸಿದ್ದಾರಂತೆ.