ಬೆಂಗಳೂರು, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿ ದೋಸ್ತಿ ಪಕ್ಷಗಳ ಬೃಹತ್ ಶಕ್ತಿಪ್ರದರ್ಶನದ ಬಳಿಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೊಸ ಹುಮ್ಮಸ್ಸಿನೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ. ಮೋದಿ ಅಲೆಯಲ್ಲಿ ಗೆದ್ದು ಬರುವ ನಿರೀಕ್ಷೆಯಲ್ಲಿರುವ ಬಿಜೆಪಿಯನ್ನು ಹೇಗಾದರೂ ಮಾಡಿ ರಾಜ್ಯದಲ್ಲಿ ಕನಿಷ್ಠ ಸೀಟುಗಳೊಂದಿಗೆ ಕಟ್ಟಿಹಾಕಬೇಕೆಂಬ ಉದ್ದೇಶದೊಂದಿಗೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಇದಕ್ಕಾಗಿ ರಾಜ್ಯದ ರೈತರು, ಯುವಜನರಿಗೆ ಭರಪೂರ ಭರವಸೆಗಳನ್ನು ಹೊಂದಿರುವ ಪ್ರಣಾಳಿಕೆಯೊಂದನ್ನು ಜೆಡಿಎಸ್ ಸಿದ್ಧಪಡಿಸಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರತಿ ರೈತ ಕುಟುಂಬಕ್ಕೆ ತಿಂಗಳಿಗೆ 25 ಸಾವಿರ ಆದಾಯ ನೀಡುವ ವಿಶೇಷ ಯೋಜನೆ, ಕೃಷಿ ಅಧಾರಿತ ಕೈಗಾರಿಕೆಗಳು, ನಿರುದ್ಯೋಗ ನಿರ್ಮೂಲನೆಗೆ ಪ್ರೋತ್ಸಾಹ ನೀಡುವ ಹಲವು ಜನಪರ ಕಾರ್ಯಕ್ರಮಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರಲಿವೆ. ಒಟ್ಟಾರೆ ಇಡೀ ರಾಜ್ಯದ ಬಡವರ ಜೀವನ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ರೂಪಿಸಲಾಗಿದೆ.