ಬೆಂಗಳೂರು: ಏಷ್ಯಾಕಪ್ 2023ರ ಟೂರ್ನಿಯಲ್ಲಿ ಭಾರತ ತಂಡ ಎರಡನೇ ಪಂದ್ಯವನ್ನು ಆಡಿದೆ. ಈ ಪಂದ್ಯದಲ್ಲಿ ಭಾರತ ತಂಡವು ನೇಪಾಳ ವಿರುದ್ದ ಅತ್ಯಂತ ಸುಲಭ ರೀತಿಯಲ್ಲಿ ಜಯ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ದ ಪಂದ್ಯ ಮಳೆಯಿಂದಾಗಿ ಪಂದ್ಯ ಡ್ರಾಆಯಿತು.
ಏಷ್ಯಾಕಪ್ 2023 ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿದೆ. ನೆನ್ನೆ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅಜೇಯ ಅರ್ಧಶತಕ ಸಿಡಿಸಿ ಭರ್ಜರಿ ಆಟವಾಡಿದರು. ರೋಹಿತ್ ಶರ್ಮಾ ಕೇವಲ 59 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ನೊಂದಿಗೆ ಅಜೇಯ 74 ರನ್ ಚಚ್ಚಿದರು. ಇದರೊಂದಿಗೆ ಹಿಟ್ಮ್ಯಾನ್ ಹಲವು ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು. ಆರಂಭದಲ್ಲೇ ಭಾರತೀಯರು ತೋರಿದ ಕಳಪೆ ಫೀಲ್ಡಿಂಗ್ನ ಸಂಪೂರ್ಣ ಲಾಭ ಪಡೆದ ಕುಶಾಲ್ ಭುರ್ಟೆಲ್ (38) ಹಾಗೂ ಆಸಿಫ್ ಶೇಖ್ (58) ಮೊದಲ ವಿಕೆಟ್ಗೆ 65 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಸ್ಪಿನ್ ಮೋಡಿ ಮಾಡಿದ ರವೀಂದ್ರ ಜಡೇಜಾ ಮೂರುನ್ನು ಪಡೆದು ನೇಪಾಳ ತಂಡಕ್ಕೆ ಶಾಕ್ ನೀಡಿದರು.
ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೋಂಪಾಲ್ ಕಮಿ 56 ಎಸೆತಗಳಲ್ಲಿ 48 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಂತಿಮವಾಗಿ ನೇಪಾಳ 48.2 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಜಡೇಜಾ ಹಾಗೂ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಒಂದೊಂದು ವಿಕೆಟ್ ಕಬಳಿಸಿದರು.
231 ರನ್ ಗಳ ಗುರಿ ಪಡೆದ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯವು ಸ್ಥಗಿತಗೊಂಡಿತು. ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ ಟೀಮ್ ಇಂಡಿಯಾ 145 ರನ್ ಗಳ ಗುರಿ ನೀಡಲಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಜೇಯರಾಗಿ ಉಳಿದ ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) 20.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ 10 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟರು.