ಮಂಗಳೂರು, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಹಿಂದೂ ಯುವಕನೋರ್ವ ತನ್ನ ಮದುವೆಯ ಅಂಗವಾಗಿ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾನೆ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ನಿವಾಸಿ, ನವವಿವಾಹಿತ ಧನಂಜಯ್ ಎಂಬುವವರು ನಿನ್ನೆ ಸಂಜೆ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ವೇಳೆ ಕೋಡಪದವು ಹಾಗೂ ಕುಕ್ಕಿಲ ಜಮಾಅತ್ ನ ಸುಮಾರು 150 ಮಂದಿ ಮಸೀದಿಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಉಪವಾಸ ತೊರೆದಿದ್ದರು. ಮೇ 8 ರಂದು ಧನಂಜಯ್ ವಿಟ್ಲ ಶ್ರೀರಾಮ ಮಂದಿರದಲ್ಲಿ ಮದುವೆಯಾಗಿದ್ದರು.ಈ ವೇಳೆ ಮದುವೆಗೆ ಊರಿನ ಎಲ್ಲರನ್ನೂ ಆಹ್ವಾನಿಸಿದ್ದರು. ಊರಿನ ಮುಸ್ಲಿಮಂ ಸಮುದಾಯದವರು ಕೇವಲ ಮದುವೆಗೆ ಹೋಗಿ ಶುಭ ಹಾರೈಸಿದ್ದರು. ಆದ್ರೆ ರಂಝಾನ್ ಉಪವಾಸದ ಕಾರಣ ಮದುವೆಯ ಔತಣಕೂಟದಲ್ಲಿ ಅವರು ಭಾಗವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಧನಂಜಯ್ ಇಂದು ಕುಕ್ಕಿಲ ಗ್ರಾಮದ ಮಸೀದಿಯಲ್ಲಿ ಮುಸ್ಲಿಮ್ ಸಮುದಾಯದವರಿಗಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು.