ಬಳ್ಳಾರಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಈ ಬಾರಿ ಚುನಾವಣೆಯಲ್ಲಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿಯವರ ಸುದ್ದಿಯೇ ಇಲ್ಲ. ಬಿಜೆಪಿಯ ಯಾವುದೇ ಅಭ್ಯರ್ಥಿಯ ಪರವೂ ಪ್ರಚಾರಕ್ಕೆ ಹೋಗಿರಲಿಲ್ಲ. ಅಷ್ಟೇ ಅಲ್ಲದೆ ಈ ಬಾರಿ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತದಾನ ಮಾಡುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಸಂಬಂಧ ರೆಡ್ಡಿಗೆ ಬಳ್ಳಾರಿಗೆ ಕಾಲಿಡದಂತೆ ಕೋರ್ಟ್ ಷರತ್ತು ವಿಧಿಸಿತ್ತು. ಹೀಗಾಗಿ ರೆಡ್ಡಿ ಮತದಾನ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ರು. ಆದ್ರೆ ಕೋರ್ಟ್ ರೆಡ್ಡಿ ಮನವಿಯನ್ನು ಅಂಗೀಕರಿಸಿರಲಿಲ್ಲ. ಹೀಗಾಗಿ ರೆಡ್ಡಿ ಈ ಬಾರಿಯೂ ಮತದಾನದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ರೆಡ್ಡಿ ಗದಗನಲ್ಲಿ ಮತದಾನ ಮಾಡಲು ನೋಂದಣಿ ಮಾಡಿಸಿದ್ರು. ಆದ್ರೆ ಅದು ಕೂಡಾ ರದ್ದಾಗಿದೆ. ಈ ಎಲ್ಲಾ ಕಾರಣಗಳಿಂದ ರೆಡ್ಡಿಗೆ ಸದ್ಯ ಎಲ್ಲೂ ಮತದಾನ ಮಾಡುವ ಹಕ್ಕು ಸಿಕ್ಕಿಲ್ಲ. ವಿಧಾನ ಸಭಾ ಚುನಾವಣೆಯಲ್ಲೂ ಜನಾರ್ದನ ರೆಡ್ಡಿಯವರಿಗೆ ಹೀಗೆ ಆಗಿತ್ತು. ಆದ್ರೆ ಜನಾರ್ದನ ರೆಡ್ಡಿಯವರ ಪುತ್ರನಿಗೆ ಇದು ಮೊದಲ ಮತದಾನವಾಗಿದ್ದು, ಹೀಗಾಗಿ ಜನಾರ್ದನ ರೆಡ್ಡಿಯವರ ಪತ್ನಿ ಮತ್ತು ಪುತ್ರ ಬಳ್ಳಾರಿಯಲ್ಲಿ ಮತ ಚಲಾಯಿಸಿದ್ರು.