ಬೆಂಗಳೂರು, ಫೆ. 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ ಫುಟ್ ಪಾತ್ ತೆರವು ಸ್ವಚ್ಚತೆ ಅರಿವಿನೊಂದಿಗೆ ಕಾರ್ಯಾಚರಣೆ ನಡೆಸುವ ಮೂಲಕ ನಿವಾಸಿಗಳು ಮತ್ತು ಸಾರ್ವಜನಿಕರ ಗಮನ ಸೆಳೆದರು. ಎಚ್ ಎಸ್ಆರ್ ಲೇಔಟ್ನ ಅಂಗರ 24 ಮತ್ತು 27ನೆಯ ಮುಖ್ಯ ರಸ್ತೆಯಲ್ಲಿದ್ದ ಫುಟ್ಪಾತ್ ತೆರವುಗೊಳಿಸಲಾಯಿತು. ಇದೇ ವೇಳೆ ನಗರದ ನಿವಾಸಿಗಳಿಗೆ ಸ್ವಚ್ಚತೆ ಕುರಿತು ಆಂದೋಲನ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಂಟಿ ಆಯುಕ್ತ ರಾಮಕೃಷ್ಣ ಹಾಗೂ ಇತರೆ ಅಧಿಕಾರಿಗಳು ಜೆಸಿಬಿ ಗಳೊಂದಿಗೆ ದಾಳಿ ನಡೆಸಿ ಫುಟ್ ಪಾತ್ನಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಹಲವಾರು ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಲಾಯಿತು.
ಜಂಟಿ ಆಯುಕ್ತರು ಹಿಂದೆ ಎಚ್ಎಸ್ಆರ್ ಬಡಾವಣೆಯಲ್ಲಿ ನಡೆಸಿದ್ದ ಕಾರ್ಯಚರಣೆಯಂತೆ ಇಂದು ಸಹ ಎಚ್ಎಸ್ಆರ್ ಬಡಾವಣೆಯ ಸೆಕ್ಟರ್ ಫಸ್ಟ್ ಹಾಗೂ ಸೆಕ್ಟರ್ 2 ಹಾಗೂ ಪರಂಗಿಪಾಳ್ಯ, ಅಗರ ಗ್ರಾಮಗಳಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಫುಟ್ಪಾತ್ ಅಂಗಡಿಗಳನ್ನು ಕೆಡವಲಾಯಿತು. ಅದೇ ರೀತಿ ಮುಂಬರುವ ದಿನಗಳಲ್ಲಿ 27ನೇ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳು ಹಾಗೂ ಇನ್ನಿತರ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಗುದೆಂದು ಇದೇ ಸಂದರ್ಭದಲ್ಲಿ ಜಂಟಿ ಆಯುಕ್ತ ರಾಮಕೃಷ್ಣ ತಿಳಿಸಿದ್ದಾರೆ.
ಜಂಟಿ ಆಯುಕ್ತ ರೊಂದಿಗೆ ಸಹಾಯಕ ಕಾರ್ಯಪಾಲಕ ಜಗದೀಶ್ ಶೆಟ್ಟರ್ ಹಾಗೂ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. ಸ್ವಚ್ಚತಾ ಆಂದೋಲನ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಪೌರಕಾರ್ಮಿಕರು ವಿವಿದ ರಸ್ತೆ ಹಾಗೂ ಬೀದಿಗಳಲ್ಲಿ ಎಸೆಯಲಾಗಿದ್ದ ಅನುಪಯುಕ್ತ ವಸ್ತುಗಳನ್ನು ಸ್ವಚ್ಚಗೊಳಿಸುವ ಮೂಲಕ ಸ್ಥಳೀಯ ನಿವಾಸಿಗಳಿಗೆ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಪ್ರತಿಯೊಬ್ಬರು ಮುಂದಾಗಿ ಸಹಕರಿಸುವಂತೆ ಅರಿವು ಮೂಡಿಸಲಾಯಿತು. ಇದೇ ವೇಳೆ ರಸ್ತೆ ಬದಿ ಬಿದ್ದಿದ್ದ ಕಸದ ರಾಶಿಯನ್ನು ತೆರವುಗೊಳಿಸಲಾಯಿತು.
ಜಂಟಿ ಆಯುಕ್ತ ರಾಮಕೃಷ್ಣ ಅವರು ಕಾರ್ಮಿಕರೊಂದಿಗೆ ಕಾಫಿ ಮತ್ತು ತಿಂಡಿ ಸೇವನೆ ಮೂಲಕ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಪೌರಕಾರ್ಮಿಕರೊಂದಿಗೆ ಸಾಮನ್ಯರಂತೆ ಬೆರತ ಜಂಟಿ ಆಯುಕ್ತ ರಾಮಕೃಷ್ಣ ಅವರು ತಿಂಡಿ ಸೇವನೆ ಮೂಲಕ ಸಮಾನತೆ ಸಾರುವ ಮೂಲಕ ವೈಶಿಷ್ಟತೆ ಮೆರೆದರು.