ಬೆಂಗಳೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಪಕ್ಷದಲ್ಲಿ ಎಲ್ಲಿ ಉಸಿರುಗಟ್ಟುವ ವಾತಾವರಣ ಇದೆಯೋ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ದೋರು, ನನ್ನ ಆತ್ಮೀಯರೂ ಹೌದು, ಅವರ ಜೊತೆ ಮಾತನಾಡಲು ನಾನು ಸಿದ್ಧನಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಯಿಸಿದ ಡಿಕೆಶಿ, ಅವರ ಸಹೋದರ ಕೂಡ ಮಂತ್ರಿ ಆಗಿದ್ದಾರೆ. ಅವರು ಸಚಿವರಾಗಿದ್ದವರು. ಪಕ್ಷದಲ್ಲಿ ಎಲ್ಲಿ ಉಸಿರು ಗಟ್ಟಿಸುವ ವಾತಾವರಣ ಇದೆಯೋ ನನಗೆ ಗೊತ್ತಿಲ್ಲ. ಭಗವಂತ ರಮೇಶ ಜಾರಕಿಹೊಳಿಗೆ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು. 20 ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಅನ್ನೋ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ದಡ್ಡರು, ಅವರಿಗೆ ಗೊತ್ತಿಲ್ಲ 78 ಶಾಸಕರು ಅವರ ಸಂಪರ್ಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. 78 ಕಾಂಗ್ರೆಸ್ ಹಾಗೂ ಜೆಡಿಎಸ್ ಎಲ್ಲ ಶಾಸಕರು ಬಿಜೆಪಿಯವರ ಜೊತೆ ವಿಶ್ವಾಸದೊಂದಿಗೆ ಇದ್ದಾರೆ. ಸಂಸಾರ ಒಂದೇ, ಅವರು ಅವರ ಮನೇಲಿ ಮಾಡ್ತಾರೆ. ನಾವು ನಮ್ಮನೇಲಿ ಮಾಡ್ತೀವಿ ಬಿಟ್ರೆ. ರಾಜಕಾರಣ ಅವರೊಂದಿಗೆ ಮಾಡಲೇ ಬೇಕಲ್ಲ. ಗಂಟೆ, ಗಡುವು ಕೊಡ್ತಾ ಇರ್ತಾರೆ ಕೊಡ್ಲಿ. ಹಳ್ಳಿಯಿಂದ ಬಂದಿದ್ದೇವೆ. ಜನರೇ ನಮ್ಮ ಆಸ್ತಿ ಎಂದು ಕುಟುಕಿದರು. ಕಂಪ್ಲಿ ಗಣೇಶಗೆ ಜಾಮೀನು ಸಿಕ್ಕ ವಿಚಾರವಾಗಿ ಮಾತನಾಡಿದ ಅವರು, ಪಾಪ ತಪ್ಪಾಗಿದೆ, ಬಹಳ ನೋವು ಅನುಭವಿಸಿದ್ದಾರೆ. ಮುಂದೆ ಅವರಿಗೆ ಕೆಟ್ಟ ಘಳಿಗೆ ಬಾರದಿರಲಿ. ಆನಂದ ಸಿಂಗ್ ಹಾಗೂ ಗಣೇಶಗೆ ಕೆಟ್ಟ ಘಳಿಗೆ ಬಂದಿತ್ತು. ಅದರಿಂದ ಹೊರಬಂದಿದ್ದಾರೆ ಎಂದರು.