ಮುಂಬೈ,ಜು. 20 : ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಇಂದು ಹಾಗೂ ನಾಳೆ ಅತೃಪ್ತರನ್ನು ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಲಿದ್ದು, ಈ ಮೂಲಕ ಸರ್ಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಆದರೆ, ಕಾಂಗ್ರೆಸ್ಗೆ ಇದ್ದ ಕೊನೆಯ ಅಸ್ತ್ರವೂ ಇದೀಗ ಟುಸ್ ಆಗಿದೆ.
ಅತೃಪ್ತ ಶಾಸಕರು ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಈ ಮಧ್ಯೆ ಶ್ರೀಮಂತ ಪಾಟೀಲ್ ಕೂಡ ಮುಂಬೈಗೆ ತೆರಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಿಜೆಪಿಯವರು ಶ್ರೀಮಂತ ಪಾಟೀಲ್ರನ್ನು ಅಪಹರಣ ಮಾಡಿದ್ದಾರೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು. ಅವರನ್ನು ಸಂಪರ್ಕಿಸಲು ಕಾಂಗ್ರೆಸ್ ಪ್ರಯತ್ನ ಪಡುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಈಗ ಕಾಂಗ್ರೆಸ್ ನ ಕೊನೆಯ ಪ್ರಯತ್ನವೂ ವಿಫಲವಾಗಿದೆ.
ಮಹಾರಾಷ್ಟ್ರದಲ್ಲಿ ಯಶೋಮತಿ ಠಾಕೂರ್ ಕಾಂಗ್ರೆಸ್ ನ ಪ್ರಭಾವಿ ನಾಯಕಿ. ಅವರು ಮಹಾರಾಷ್ಟ್ರ ಕಾಂಗ್ರೆಸ್ ನ ಕಾರ್ಯಾಧ್ಯಕ್ಷೆಯೂ ಹೌದು. ಹಾಗಾಗಿ ಮುಂಬೈನ ಸೇಂಟ್ ಜಾರ್ಜ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡುವಂತೆ ರಾಜ್ಯ ನಾಯಕರು ಕೋರಿದ್ದರು. ಈ ನಿರ್ದೇಶನದ ಮೇರೆಗೆ ಅವರು ಆಸ್ಪತ್ರೆಗೆ ತೆರಳಿದ್ದರು.
ಆದರೆ, ಶ್ರೀಮಂತ ಪಾಟೀಲ ಭೇಟಿಗೆ ಪೊಲೀಸರು ಯಶೋಮತಿಗೆ ಅವಕಾಶ ನೀಡಲಿಲ್ಲ. ಇದೇ ವೇಳೆ ಶ್ರೀಮಂತ ಪಾಟೀಲ್ ಪುತ್ರ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಹಾಗೂ ಪಾಟೀಲ್ ಪುತ್ರನ ವರ್ತನೆ ವಿರುದ್ಧ ಯಶೋಮತಿ ಕಿಡಿ ಕಾಡಿದ್ದಾರೆ.