ಕೋಲಾರ: ಕನ್ನಡ ಉಳಿಸಿ ಬೆಳೆಸುವುದಲ್ಲದೇ ಅದನ್ನು ಬಳಸುವುದು ನಮ್ಮ ಕರ್ತವ್ಯ ಆಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ ನಾಗರಾಜ ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ನೇಮಕಗೊಂಡಿರುವ ಅ.ಕೃ ಸೋಮಶೇಖರ್ ಅವರನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಕನ್ನಡ ಸಾರಸ್ವತ ಲೋಕವು ಕನ್ನಡಮಯ ವಾತಾವರಣ ಗಟ್ಟಿ ಗೊಳಿಸಬೇಕಾದರೆ, ಸಾಹಿತ್ಯ ಸಮ್ಮೇಳನಗಳು ನಾಡಿನ ಸಾಂಸ್ಕೃತಿಕ ಹಬ್ಬದಂತಾಗಬೇಕು. ಪ್ರತಿ ಮನೆ ಮನೆಯಲ್ಲೂ ಕನ್ನಡತನ ಕನ್ನಡ ಭಾಷೆಯ ಅಭಿಮಾನ ಮೂಡಿಸುವ ದಿಸೆಯಲ್ಲಿ ನಾವು ಕನ್ನಡಿಗರು ಎಂಬ ಹೆಮ್ಮೆ ನಮ್ಮದಾಗಬೇಕು ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತಾನಾಡಿ, ಸಮ್ಮೇಳನಗಳು ಕನ್ನಡದ ಅಕ್ಷರದ ಜಾತ್ರೆ ಆಗಬೇಕು. ಕನ್ನಡಿಗರು ಅಲ್ಲದೆ ಇತರರು ಕನ್ನಡ ಕಲಿಕೆಗೆ ಒತ್ತಾಸೆ ನೀಡವಂತಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಕನ್ನಡ ಕಟ್ಟಾಳು ಅ.ಕೃ ಸೋಮಶೇಖರ್ ಮಾತಾನಾಡಿ, ಕನ್ನಡಿಗರಿಗೆ ಧಕ್ಕೆ ಆಗುವ ಯಾವುದೇ ವಿಚಾರದಲ್ಲಿ ಹೋರಾಟಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕವಿ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳು ನಮ್ಮ ಸುತ್ತಮುತ್ತಲಿನ ಕನ್ನಡ ಅಭಿಮಾನದ ಕನ್ನಡಿಗರನ್ನು ಗುರುತಿಸುವಂತಾಗಬೇಕು. ಹಿರಿಯ ಮತ್ತು ಕಿರಿಯ ಸಾಹಿತಿಗಳನ್ನು ಗೌರವಿಸುವ ಕೆಲಸ ಮಾಡಬೇಕು. ಸ್ಥಳೀಯ ಕವಿಗಳಿಗೆ ಸೂಕ್ತವಾದ ಅವಕಾಶಗಳನ್ನು ನೀಡಿ ಸತ್ಕರಿಸಬೇಕು ಎಂದರು.