ಮಂಗಳೂರು ಮಾ.12, ನ್ಯೂಸ್ ಎಕ್ಸ್ ಪ್ರೆಸ್: ದಶಕಗಳ ಹಿಂದಿನ ಮಿಗ್ 21ರಿಂದ 4ನೇ ತಲೆಮಾರಿನ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ದೇಶದ ಹೀರೋ ಆಗಿದ್ದಾರೆ.
ಎಫ್-16 ವಿಮಾನವನ್ನು ಹೊಡೆದುರುಳಿಸಿ, ನಂತರ ಪಾಕ್ ಸೈನ್ಯದ ಬಂಧನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು, ಮರಳಿ ಭಾರತಕ್ಕೆ ಬಂದಾಗಿದೆ. ಪಾಕ್ ನೆಲದಲ್ಲೇ ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಪಠ್ಯ ಕೂಡ ಸಿದ್ಧವಾಗುತ್ತಿದೆ.
ಈಗ ಅಭಿನಂದನ್ ವರ್ಧಮಾನ್ ಅವರ ಮೇಲಿನ ಅಭಿಮಾನ ಮಂಗಳೂರಿನ ಸಿಟಿ ಬಸ್ ಗಳಲ್ಲಿಯೂ ವ್ಯಕ್ತವಾಗುತ್ತಿದೆ. ಹೌದು, ಮಂಗಳೂರಿನ ಸಿಟಿ ಬಸ್ ಒಂದರ ಮೇಲೆ ಅಭಿನಂದನ್ ಅವರ ಭಾವ ಚಿತ್ರ ಅನಾವರಣಗೊಂಡಿದೆ.
ಮಂಗಳಾದೇವಿ-ಕಾವೂರು ನಡುವೆ ಸಂಚರಿಸುವ 14-ಡಿ ನಂಬರಿನ ಬಸ್ ಮೇಲೆ ಅಭಿನಂದನ್ ಅವರ ಚಿತ್ರ ಬಿಡಿಸಲಾಗಿದ್ದು, ಸೆಲ್ಯೂಟ್ ಇಂಡಿಯನ್ ಆರ್ಮಿ ಎಂದು ಬರೆಯಲಾಗಿದೆ.
ಈ ಬಸ್ ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ ನ ಸಿಬ್ಬಂದಿ, ದೇಶ ಕಾಯುವ ಈ ಯೋಧರಿಗೆ ನಮ್ಮದೊಂದು ಸಲಾಂ. ಅದರಲ್ಲೂ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ದೇಶದ ನಿಜವಾದ ಹೀರೋ. ಅವರ ಬಗ್ಗೆ ಅಪಾರ ಅಭಿಮಾನ ಇದೆ. ಆದ್ದರಿಂದ ಅವರ ಸ್ಟೈಲಿಶ್ ಮೀಸೆ ಇರುವ ಚಿತ್ರವನ್ನು ಬಸ್ ಮೇಲೆ ಬಿಡಿಸಲಾಗಿದೆ ಎಂದು ತಿಳಿಸಿದ್ದಾರೆ.