ಮುಂಬೈ,ಮಾ.29, ನ್ಯೂಸ್ ಎಕ್ಸ್ ಪ್ರೆಸ್: ನೂರಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಪಕರು ಒಟ್ಟುಗೂಡಿ ಪ್ರಜಾಪ್ರಭುತ್ವ ಉಳಿಸಿ-ಬಿಜೆಪಿಯನ್ನು ಹೊರಗಿಡಿ ಎಂಬ ಹೇಳಿಕೆಯೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸದಂತೆ ಕರೆ ನೀಡಿದ್ದಾರೆ.
ರಾಜಕೀಯ ಧ್ರುವೀಕರಣ ಮತ್ತು ದ್ವೇಷ ರಾಜಕಾರಣ, ದಲಿತರು, ಮುಸ್ಲಿಮರು ಮತ್ತು ರೈತರ ನಿರ್ಲಕ್ಷ್ಯ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸೇರಿದಂತೆ ಹಲವು ದಮನಕಾರಿ ನೀತಿಗಳನ್ನು ಬಿಜೆಪಿ ಸರ್ಕಾರ ಅನುಸರಿಸುತ್ತಿದೆ ಎಂಬುದು ನಿರ್ಮಾಪಕರ ಆರೋಪವಾಗಿದೆ.
ದೇಶದ ಪ್ರಜಾಪ್ರಭುತ್ವ ಮತ್ತು ದೇಶದ ಕಟ್ಟಕಡೆಯ ವ್ಯಕ್ತಿಗಳ ಹಿತಾಸಕ್ತಿಗಾಗಿ ಬಿಜೆಪಿಯನ್ನು ದೂರವಿಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಂಸ್ಕøತಿಕವಾಗಿ, ಭೌಗೋಳಿಕವಾಗಿ ವೈವಿಧ್ಯತೆ ಹೊಂದಿರುವ ಭಾರತದೇಶದ ಪ್ರಜೆಗಳೆಂದು ಹೇಳಲು ಹೆಮ್ಮೆಯಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಿಜೆಪಿ ಕೆಲವು ಧೋರಣೆಗಳಿಂದ ಶಾಂತಿ ಹದಗೆಡುತ್ತಿದೆ.
ಭಾರತದ ಸಂವಿಧಾನವನ್ನು ಗೌರವಿಸುವ ಸರ್ಕಾರವನ್ನು ಆಯ್ಕೆ ಮಾಡಲು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಂತಹ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಹಕ್ಕು ನಿಮ್ಮದಾಗಿದೆ ಎಂದು ಕರೆ ನೀಡಿದ್ದಾರೆ.
ಹಿರಿಯ ಸಾಕ್ಷ್ಯ ಚಿತ್ರನಿರ್ದೇಶಕ ಆನಂದ್ ಪಟ್ವರ್ಧನ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ವೆಟ್ರಿ ಮಾರನ್, ಜನಪ್ರಿಯ ಮಲಯಾಳಂ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಆಶಿಕ್ ಅಬು, ಉತ್ಸವ ನಿರ್ದೇಶಕ ಬಿನಾ ಪಾಲ್ ಮತ್ತು ಇತರ ಪ್ರಸಿದ್ಧ ಸ್ವತಂತ್ರ ಚಿತ್ರ ನಿರ್ಮಾಪಕರು ಗುರುವೀಂದರ್ ಸಿಂಗ್ , ದೇವಶಿಶ್ ಮಖೀಜಾ, ಪುಷ್ಪೇಂದ್ರ ಸಿಂಗ್, ಸನಾಲ್ ಕುಮಾರ್ ಸಾಸಿಧರನ್ ಮತ್ತು ಕಬೀರ್ ಸಿಂಗ್ ಚೌಧರಿ ಸೇರಿದಂತೆ ಹಲವು ಚಿತ್ರ ನಿರ್ಮಾಪಕರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. 100ಕ್ಕೂ ಹೆಚ್ಚು ನಿರ್ಮಾಪಕರ ಸಹಿ ಇರುವ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಜಾಪ್ರಭುತ್ವ ಉಳಿಸಿ, ಬಿಜೆಪಿಯನ್ನು ಹೊರಗಿಡಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.