ಶಿವಮೊಗ್ಗ, ಏ. 24, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಇಬ್ಬರು ಮುಖ್ಯಮಂತ್ರಿಗಳ ಪುತ್ರರ ಹಣಾಹಣಿಯ ನಡೆದಿದ್ದು, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಗೆಲುವು ಖಚಿತ ಎಂದು ಬಿಜೆಪಿ ನಾಯಕ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ವಿಜಯಶಾಲಿ ಆಗುತ್ತಾರೆ. ಲೋಕಸಭಾ ಕ್ಷೇತ್ರದಲ್ಲಿ ನಮೋ ಟ್ರೆಂಡ್ ಹಿನ್ನೆಲೆಯಲ್ಲಿ ಯುವ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ.
ಕಳೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ರಾಘವೇಂದ್ರ ಗೆಲುವು ಪಡೆದಿದ್ದು, ಕಳೆದ 6 ತಿಂಗಳಲ್ಲಿ ಬಿಜೆಪಿ ಸಂಸದರಾಗಿ ಮಾಡಿದ ಪ್ರಯತ್ನದಿಂದ, ಅಭಿವೃದ್ಧಿ ಕಾರ್ಯಗಳಿಂದ ಹೆಚ್ಚು ಮತಗಳು ಬಿಜೆಪಿ ಪರವಾಗಿ ಚಲಾಯಿಸಲ್ಪಟ್ಟಿವೆ. ಇನ್ನು ಇದೇ ವೇಳೆ ವಿಪಕ್ಷ ಮುಖಂಡರ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಜೆಡಿಎಸ್ ಒಗ್ಗೂಡಿ ಬಂದರೂ ನಮ್ಮ ಗೆಲುವಿನೊಳಗೆ ನಮ್ಮ ವಿರೋಧಿ ಗಳ ಪಾತ್ರ ಇದೆ. ವಿರೋಧಿಗಳು ಈಗಲೇ ಕಾರಣ ಹುಡುಕಿಕೊಳ್ಳುವುದು ಒಳ್ಳೆಯದು. ಸೋತ ಮೇಲೆ ಮತಯಂತ್ರ ದ ಮೇಲೆ ದೋಷ ಹೇರುವುದು ಮಾಡುತ್ತಾರೆ ಎಂದು ವಿಪಕ್ಷ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.