ನವದೆಹಲಿ: ಪತಂಜಲಿ ಆಯುರ್ವೇದಿಕ್ ಲಿ. ಕಂಪನಿಯ ಲೆಕ್ಕಪತ್ರಗಳ ಕುರಿತಾಗಿ ತೆರಿಗೆ ಇಲಾಖೆಯ ನಡೆಸುವ ವಿಶೇಷ ತನಿಖೆಗೆ ಸಹಕರಿಸುವಂತೆ ಇಂದು ದೆಹಲಿ ಹೈಕೋರ್ಟ್ ಬಾಬಾ ರಾಮದೇವ್ಗೆ ನಿರ್ದೇಶನ ನೀಡಿದೆ.
ತನ್ನ ವಿರುದ್ಧ ತೆರಿಗೆ ಇಲಾಖೆ ನಡೆಸುವ ವಿಶೇಷ ತನಿಖೆ ಬಗ್ಗೆ ಪತಂಜಲಿ ಆಯುರ್ವೇದಿಕ್ ಲಿ. ಕಂಪನಿ ಆಕ್ಷೇಪ ವ್ಯಕ್ತಪಡಿಸಿ, ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಇಂದು ನ್ಯಾಯಮೂರ್ತಿ ಎಸ್. ರವೀಂದರ್ ಭಟ್ಟ ಅವರು ತನಿಖೆಗೆ ಸಹಕರಿಸುವಂತೆ ರಾಮದೇವ್ ಅವರಿಗೆ ಸೂಚನೆ ನೀಡಿದೆ.
೨೦೧೦-೧೧ರಲ್ಲಿ ತೆರಿಗೆ ಇಲಾಖೆಯ ತನಿಖಾ ಪ್ರಕ್ರಿಯೆಯನ್ನು ಪತಂಜಲಿ ಆಯುರ್ವೇದಿಕ್ ಲಿ. ಪ್ರಶ್ನಿಸಿತ್ತು. ಕಂಪನಿ ಲೆಕ್ಕಪತ್ರಗಳು ಜಟಿಲವಾಗಿದ್ದು, ವಿಶೇಷ ತನಿಖೆ ಅಗತ್ಯವಿದೆ ಎಂದು ತೆರಿಗೆ ಇಲಾಖೆ ಸಹ ಪ್ರತಿವಾದ ಮಂಡಿಸಿದೆ. ಇದಕ್ಕೆ ಸಮ್ಮತಿ ಸೂಚಿಸಿರುವ ಹೈಕೋರ್ಟ್ ತನಿಖೆಗೆ ಸಹಕರಿಸುವಂತೆ ಆಜ್ಞಾಪಿಸಿದೆ. ಇದು ರಾಮದೇವ್ಗೆ ತಲೆನೋವಾಗಿ ಪರಿಣಮಿಸಿದೆ.