ಬೆಂಗಳೂರು:ಈ ಮಕ್ಕಳು ಇಲ್ಲಿಯವರೆಗೂ ಶಾಲೆಯ ಮುಖವನ್ನೇ ನೋಡದವರು.೪ ರಿಂದ ೧೨ ವರ್ಷದವರೆಗಿನ ಈ ಮಕ್ಕಳ ತಂದೆ ತಾಯಂದಿರು ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರಿಗೆ ವಲಸೆ ಬಂದು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋದಾಗ ಮನೆಯ ಹಿರಿಯ ಮಕ್ಕಳು ಉಳಿದವರನ್ನು ನೋಡಿಕೊಳ್ಳುತ್ತಾ ಮನೆ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಅವರನ್ನು ಶಿಕ್ಷಣದ ವ್ಯಾಪ್ತಿಗೆ ತರಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಟ್ಟದಾಸನಪುರ, ಚಿಕ್ಕತೋಗೋರು ಮತ್ತು ಪ್ರಗತಿನಗರ ಶಾಖೆಯ ಕಾರ್ಯಕರ್ತರು ಅಭಿಯಾನವೊಂದನ್ನು ರೂಪಿಸಿದರು. ಗುಡಿಸಲುಗಳು ಮತ್ತು ಶೆಡ್ಗಳಲ್ಲಿ ವಾಸವಾಗಿರುವ ಎಲ್ಲರ ಮನೆಗೂ ತೆರಳಿ ಅವರ ತಂದೆ ತಾಯಿಗಳಿಗೆ ಮನವರಿಕೆ ಮಾಡಿಸಿ, ವೇಣುಗೋಪಾಲ್ರವರ ಸಹಾಯದಿಂದ ಚಂದ್ರಮೋಹನ್ರವರ ಖಾಲಿ ನಿವೇಶನವನ್ನು ಸ್ವಚ್ಛಗೊಳಿಸಿಕೊಂಡು, ಅದರಲ್ಲಿದ್ದ ಮನೆಗೆ ಸುಣ್ಣ-ಬಣ್ಣ ಬಳಿದು, “ಅಯೋಧ್ಯೆ ಶಿಶು ಮಂದಿರ”ವನ್ನು ಆರಂಭಿಸಿ, ಎಲ್ಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಸ್ಲೇಟ್, ಬಳಪ, ಸಮವಸ್ತ್ರ ಬ್ಯಾಗ್ಗಳನ್ನು ವಿತರಿಸಿ, ಶಿಕ್ಷಕರೊಬ್ಬರನ್ನು ನೇಮಿಸಿ ಪ್ರತಿದಿನವೂ ಎರಡರಿಂದ ಮೂರು ಗಂಟೆಗಳ ಕಾಲ ಅವರಿಗೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.