ಗೋಕಾಕ ,ಆ.12 : ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಮಾಡಿದರೆ, ನನ್ನ ಆಸ್ತಿ ಮಾರಿಯಾದರೂ ಹಣದ ವ್ಯವಸ್ಥೆ ಮಾಡಿ ನೀಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನಿರಾಶ್ರಿತರಿಗೆ ಅಭಯ ನೀಡಿದರು.
ಭಾನುವಾರ ಹೊಸಪೇಠ ಗಲ್ಲಿಯಲ್ಲಿರುವ ತಮ್ಮ ಕಾರ್ಯಾಲಯದಲ್ಲಿ ಸ್ವಾಭಿಮಾನಿ ಬಿ.ಶ್ರೀರಾಮುಲು ಬ್ರಿಗೇಡ್, ಕಿಚ್ಚ ಸುದೀಪ ಅಭಿಮಾನಿ ಬಳಗದವರು ನೆರೆ ಸಂತ್ರಸ್ತರಿಗೆ ಊಟೋಪಚಾರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ವೇಳೆ ಸರ್ಕಾರದ ಪರಿಹಾರ ಕಾರ್ಯ ವಿಳಂಬವಾದರೇ ತಾತ್ಕಾಲಿಕ ಸಂತ್ರಸ್ತರಿಗೆ 15 ಕೋಟಿ ರು. ವೆಚ್ಚದಲ್ಲಿ 400 ಚದರ ಮೀಟರ್ ಅಳತೆಯ 5 ಸಾವಿರ ಶೆಡ್ಗಳನ್ನು ತಮ್ಮ ಸ್ನೇಹಿತರ ಸಹಕಾರದಿಂದ ನಿರ್ಮಿಸಿಕೊಡಲಾಗುವುದು. ಸಂತ್ರಸ್ತರು ಯಾವುದೇ ಕಾರಣಕ್ಕೂ ಹೆದರಬಾರದು ಎಂದು ಹೇಳಿದರು.
ವರುಣನ ಆರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ಅಂದಾಜು 5 ಸಾವಿರಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನೂ ಮನೆಗಳ ಸಂಖ್ಯೆ ಹೆಚ್ಚಾಗಬಹುದು. ಈ ಕೂಡಲೇ ಸಂತ್ರಸ್ತರಿಗೆ ವಾಸಿಸಲು ಸೂರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ತಿಳಿಸಿದರು.