ಬೆಂಗಳೂರು: ಈಗಲ್ಟನ್ ರೆಸಾರ್ಟ್ನಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಸದ್ಯ ಚೇತರಿಸಿಕೊಂಡಿದ್ದು, ಹಲ್ಲೆ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಎಫ್ಐಆರ್ ದಾಖಲಾಗುತ್ತಿದ್ದಂತೆ ಕಣ್ಮರೆಯಾಗಿದ್ದಾರೆ. ಈ ಮಧ್ಯ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಮಯ ಬಂದಿದ್ದರೂ ಗಣೇಶ್ ಬಂಧನವಾಗುವವರೆಗೂ ಡಿಸ್ಚಾರ್ಜ್ ಆಗಲ್ಲ ಎಂದು ಆನಂದ್ ಸಿಂಗ್ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ನಿರೀಕ್ಷಣ ಜಾಮೀನು ಪಡೆಯಲು ಕಂಪ್ಲಿ ಶಾಸಕ ಗಣೇಶ್ ಸಿದ್ಧತೆ ನಡೆಸಿದ್ದಾರೆ. ಗಣೇಶ್ಗೆ ಜಾಮೀನು ಸಿಗಬಾರದು ಅನ್ನೋ ಕಾರಣಕ್ಕೆ ಆಸ್ಪತ್ರೆಯಲ್ಲೇ ಇನ್ನೆರಡು ದಿನ ಉಳಿಯಲು ಆನಂದ್ ಸಿಂಗ್ ನಿರ್ಧರಿಸಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಆನಂದ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ಗಣೇಶ್ಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಿದೆ. ಸದ್ಯ ಆನಂದ್ ಸಿಂಗ್ ಅವರ ಗಾಯಗಳೆಲ್ಲಾ ಮಾಸಿದ್ದು, ಕಣ್ಣಿನ ಭಾಗದಲ್ಲಿ ಸ್ವಲ್ಪ ಮಟ್ಟಿಗಿನ ಊತವಿದೆ. ಶಾಸಕ ಆನಂದ್ ಸಿಂಗ್ ಬಯಸಿದ್ರೆ, ಡಿಸ್ಚಾರ್ಜ್ ಮಾಡುವುದಾಗಿ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸದ್ಯ ಬಿಡದಿ ಪೊಲೀಸರು ಕೇಸ್ ದಾಖಲಿಸಿ, ಶಾಸಕ ಗಣೇಶ್ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಕಾಂಗ್ರೆಸ್ ನಾಯಕರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯಿತಿಗೆ ಶಾಸಕ ಗಣೇಶ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.