ಬೆಂಗಳೂರು: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕರು ಬಡಿದಾಡಿಕೊಂಡ ಪ್ರಕರಣದ ತನಿಖೆಯನ್ನು ರಾಮನಗರ ಪೊಲೀಸರು ಚುರುಕುಗೊಳಿಸಿದ್ದಾರೆ.
ಈ ನಡುವೆ ಈ ಪ್ರಕರಣದ ಪ್ರಮುಖ ಆರೋಪಿ ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರು ರಾಮನಗರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಅವರು ಈ ಕೇಸಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದರು. ಗಣೇಶ್ ವಿರುದ್ಧ ಆನಂದ್ ಸಿಂಗ್ ಹಾಗೂ ಅವರ ಕುಟುಂಬದವರು ನೀಡಿದ ಹೇಳಿಕೆ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ.
ಗಣೇಶ್ ಪರ ನಿರೀಕ್ಷಣಾ ಜಾಮೀನಿಗೆ ನ್ಯಾಯವಾದಿ ಹನುಮಂತರಾಯಪ್ಪ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು ಕಾರ್ಯಾಚರಣೆ ನಡೆಯುತ್ತಿದೆ.