ಹಾಸನ: ಹಾಸನದಲ್ಲಿ ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷಗಳ ತಯಾರಿ ಜೋರಾಗಿದೆ. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳಿದ್ದು, ಯಾರಿಗೇ ಟಿಕೆಟ್ ಕೊಟ್ಟರೂ ಉಳಿದ ಆಕಾಂಕ್ಷಿಗಳು ಬಂಡಾಯವೇಳುವ ಸಾಧ್ಯತೆ ಇದೆ. ಹೀಗಾಗಿ ಹಾಸನ ಟಿಕೆಟ್ ಮೈತ್ರಿ ಪಕ್ಷಗಳಿಗೆ ಕಗ್ಗಂಟಾಗಿದೆ. ಟಿಕೆಟ್ ಘೋಷಣೆ ಮಾಡುವ ಮೊದಲೇ ಮೈತ್ರಿಯಲ್ಲಿ ವಾರ್ ಶುರುವಾಗಿದೆ.
ಕರ್ನಾಟಕ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ಬಿರುಕು ಕಾಣಿಸಿಕೊಂಡಿದೆ. ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮಧ್ಯಸ್ಥಿಕೆ ವಹಿಸಿ ಮನಸ್ತಾಪ ಸರಿಪಡಿಸಲು ಮುಂದಾಗಿದ್ದಾರೆ. ಆದರೆ ಹಾಸನದಲ್ಲಿ ಮಾತ್ರ ಆಕಾಂಕ್ಷಿಗಳು ಬಂಡಾಯವೇಳುವ ಲಕ್ಷಣ ದಟ್ಟವಾಗಿ ಕಾಣಿಸತೊಡಗಿದೆ. ಇದರಿಂದ ಈ ಮನಸ್ತಾಪ ಬಗೆಹರಿಸುವುದು ಹೈಕಮಾಂಡ್ಗೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.
ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿ ಎಂದು ಪ್ರಚಾರ ಶುರು ಮಾಡಿದ್ದಾರೆ. ಇದು ಬಿಜೆಪಿ ಆಕಾಂಕ್ಷಿಗಳಿಗೆ ನುಂಗಲಾಗದ ತುತ್ತಾಗಿದೆ. ಜೆಡಿಎಸ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪ್ರಚಾರ ಆರಂಭಿಸಿದೆ. ಇನ್ನೂ ಮೈತ್ರಿ ಅಭ್ಯರ್ಥಿ ಅಂತಿಮವಾಗಿಲ್ಲ ಎಂದು ಬಿಜೆಪಿ ಸ್ಥಳೀಯ ನಾಯಕರು ಅಮಸ್ವರ ನುಡಿದಿದ್ದಾರೆ. ಮಾತ್ರವಲ್ಲದೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರನ್ನು ಜೆಡಿಎಸ್ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ಅದನ್ನು ಜೆಡಿಎಸ್ ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಹೀಗಾಗಿ ಪ್ರೀತಂ ಗೌಡರ ತಂಡ ಅವರ ಅತ್ಯಾಪ್ತ ಎಚ್ಪಿ ಕಿರಣ್ ಕುಮಾರ್ ಅವರನ್ನು ಪ್ರಚಾರಕ್ಕಿಳಿಸಿದೆ. ಇದರಿಂದ ಮೈತ್ರಿ ಪಕ್ಷಗಳಲ್ಲಿ ಒಮ್ಮತವಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಜೆಡಿಎಸ್ ತಮ್ಮನ್ನು ವಿಶ್ವಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿಯನ್ನು ಘೋಷಿಸಿಕೊಂಡು ಪ್ರಚಾರ ಆರಂಭಿಸಿದೆ ಎಂದು ಇದಕ್ಕೆ ತಿರುಗೇಟು ನೀಡಲು ಸಿದ್ದರಾದ ಪ್ರೀತಂಗೌಡ ತಂಡ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧಿಸಲು ಕಿರಣ್ ಕುಮಾರ್ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿ ಪ್ರಚಾರ ಆರಂಭಿಸಿದೆ. ನಾಮಪತ್ರಕ್ಕೆ ಶನಿವಾರ ಬೆಳಗ್ಗೆ ಬೆಂಬಲಿಗರ ಜೊತೆ ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕಿರಣ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ.
ಈ ಸಮಯದಲ್ಲಿ ಹಾಸನದಲ್ಲಿ ಮೈತ್ರಿಯಲ್ಲಿ ಮನಸ್ತಾಪ ಕಾಣಿಸಿಕೊಂಡಿದೆ. ಇದನ್ನು ವರಿಷ್ಠರು ಬಗೆಹರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಪಕ್ಷದಲ್ಲಿ ಮನಸ್ತಾಪ ಮುಂದುವರೆದರೆ ಅಭ್ಯರ್ಥಿಗಳು ಬಂಡಾಯ ಏಳುವ ಲಕ್ಷಣ ಹೆಚ್ಚಾಗಿದೆ. ಈ ಮನಸ್ತಾಪದ ಲಾಭ ಕಾಂಗ್ರೆಸ್ ಪಡೆಯುವ ಸಾಧ್ಯತೆ ಕೂಡ ಇದೆ. ಹೀಗಾಗಿ ಅಭ್ಯರ್ಥಿ ಯಾರೇ ಆಗಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.