ಬೆಂಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಕುಟುಂಬಕ್ಕೆ ಅಪಾರ ದೈವಭಕ್ತಿ ಮಾತ್ರವಲ್ಲದೆ ಜ್ಯೋತಿಷ್ಯದ ಕುರಿತು ನಂಬಿಕೆ ಜಾಸ್ತಿ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಹೊರತಲ್ಲ. ಹೀಗಾಗಿಯೇ ಯಾವುದೇ ಪ್ರಮುಖ ಕಾರ್ಯ ಕೈಗೊಳ್ಳಬೇಕಾದರೆ ಗಳಿಗೆಯನ್ನು ನೋಡಿಯೇ ಮುಂದುವರೆಯುತ್ತಾರೆ. ಜೊತೆಗೆ ಕುಮಾರಸ್ವಾಮಿಯವರಿಗೆ ತಾವು ಬಳಸುತ್ತಿರುವ ರೇಂಜ್ ರೋವರ್ ಕಾರು ಅದೃಷ್ಟ ತಂದುಕೊಟ್ಟಿದೆ ಎಂಬ ನಂಬಿಕೆ ಇದೆ. ಹೀಗಾಗಿ ಮುಖ್ಯಮಂತ್ರಿಯಾದರೂ ಸರ್ಕಾರಿ ಕಾರನ್ನು ಬಳಸದೆ 6633 ಸಂಖ್ಯೆಯ ರೇಂಜ್ ರೋವರ್ ಕಾರನ್ನೇ ಈಗಲೂ ಬಳಸುತ್ತಿದ್ದಾರೆ. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿರುವ ಕುಮಾರಸ್ವಾಮಿಯವರು ಪ್ರಚಾರಕ್ಕಾಗಿ ತಮ್ಮ ಅದೃಷ್ಟದ ಕಾರಿನಲ್ಲಿ ತೆರಳಿದ್ದ ವೇಳೆ ಕೈಕೊಟ್ಟಿದೆ. ನಿಕಿಲ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಈ ಕಾರು ಕೆಟ್ಟು ನಿಂತಿತ್ತೆಂದು ಹೇಳಲಾಗಿದ್ದು, ಇದರಿಂದಾಗಿ ಮುಖ್ಯಮಂತ್ರಿಗಳಿಗೆ ಮಗನ ಚುನಾವಣಾ ಫಲಿತಾಂಶದ ಕುರಿತು ಚಿಂತೆ ಶುರುವಾಗಿದೆಯಂತೆ.