ಚಿಕ್ಕೋಡಿ, ಜ. 31: ಪಟ್ಟಣದ ಕೆ ಇ ಬಿ ಕ್ವಾರ್ಟರ್ಸ್ ಮೈದಾನದಲ್ಲಿ ಹಮ್ಮಿಕೊಂಡಿರುವ ಶ್ರೀ ಸಾಯಿ 13ನೇ ವಾರ್ಷಿಕೋತ್ಸವದ ಸಾಮೂಹಿಕ ವಿವಾಹ ನೆರವೇರಿಸಲಾಯಿತು.
ಭಾರತೀಯ ಸಾಂಸ್ಕೃತಿಯಲ್ಲಿ ಮನಸ್ಸುಗಳನ್ನು ಪರಿವರ್ತನೆ ಮಾಡುವ ಶಕ್ತಿಯಿದೆ ಎಂದು ನಿಡಸೋಸಿ ಸಿದ್ದಸಂಸ್ಥಾನ ಮಠದ ಶ್ರೀ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಪಟ್ಟಣದ ಶಿರಡಿ ಸಾಯಿ ಬಾಬಾ ಮಂದಿರದ 13ನೇ ವಾರ್ಷಿಕೋತ್ಸವ ನಿಮಿತ್ಯವಾಗಿ ನಡೆದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಹಾಗೂ ಹಿರಿಯ ನಾಗರಿಕರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಸಾಯಿ ಪರಿವಾರ ಭಾರತೀಯ ಸಾಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ. ಮನುಷ್ಯ ಜೀವನದಲ್ಲಿ ಶಿಸ್ತು ಮುಖ್ಯವಾಗಿದೆ ಅದನ್ನು ಸಾಯಿ ಸೇವಾ ಪರಿವಾರ ಕಲಿಸುತ್ತದೆ ಎಂದರು.
ಯುವಕರು ದೇಶದ ಧರ್ಮ, ಆರ್ಥಿಕತೆಯನ್ನು ಉಳಿಸುವ ಕಾರ್ಯ ಮಾಡುವುದರ ಜೊತೆಗೆ ಜೀವನದಲ್ಲಿ ಸಾಯಿಬಾಬಾರ ಆದರ್ಶಗಳನ್ನು ಅಳವಡಿಸಿಕೊಂಡು ಹೋದಲ್ಲಿ ಜೀವನ ಸಾರ್ಥಕತೆಯಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸಾಮೂಹಿಕ ವಿವಾಹ ಮಾಡುವ ಸಂಘ ಸಂಸ್ಥೆಗಳಿಗೆ ರಾಜ್ಯ ಸರಕಾರ ಹಣಕಾಸಿನ ನೆರವು ನೀಡುತ್ತಿರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಾಯಿ ಪರಿವಾರ ಕಳೆದ 13 ವರ್ಷದಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಿದೆ. ಆದ್ದರಿಂದ ಸಮಾಜಮುಖಿಯಾಗಿ ಕೆಲಸ ಮಾಡುವ ಸಾಯಿ ಪರಿವಾರಕ್ಕೆ ಸರಕಾರ ಅನುದಾನ ನೀಡುವಂತೆ ಒತ್ತಾಯಿಸಿದರು.
ಚಿಂಚಣಿ ಸಿದ್ದಾಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಮನೆಯಲ್ಲಿ ಒಲುಮೆ ಪ್ರೀತಿ, ವಿಶ್ವಾಸ ಗಂಡ, ಹೆಂಡಿತಿಯರಲ್ಲಿದ್ದಾಗ ಮಾತ್ರ ಯಶಸ್ವಿ ಜೀವನ ಸಾಗಿಸಲು ಸಾಧ್ಯ ಎಂದು ತಿಳಿಸಿದರು.
ದೇಶದ ಇತಿಹಾಸವನ್ನು ಮೇಲಕು ಹಾಕಿದಾಗ ಆದ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರತಿಯೊಬ್ಬರಲ್ಲಿ ಒಂದಿಲ್ಲೊಂದು ಋಣ ಇದ್ದೆ ಈ ನಿಟ್ಟಿನಲ್ಲಿ ಸಾಯಿ ಸೇವಾ ಪರಿವಾರ ಸರ್ವಧರ್ಮ ಉಚಿತ ಸಾಮೋಹಿಕ ವಿವಾಹ ಮಾಡುವ ಮೂಲಕ ಸಂತೋಷವನ್ನು ಕಾಣುತ್ತಿರುವುದು ಶ್ಲಾಘನೀಯ ಎಂದರು.