ಬೆಂಗಳೂರು: ನೇಕಾರರ 150 ಕೋಟಿ ರೂ. ಸಾಲ ಮನ್ನಾ ಮಾಡಿ ಸಂಪೂರ್ಣ ಋಣಮುಕ್ತರನ್ನಾಗಿ ಮಾಡುವಂತೆ ರಾಜ್ಯ ನೇಕಾರರ ಸೇವಾ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಿಯೋಗ, ರಾಜ್ಯದಲ್ಲಿ 60 ಲಕ್ಷ ನೇಕಾರರಿದ್ದು, ಕೈಮಗ್ಗ ನೇಕಾರರ ಸೊಸೈಟಿ, ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 100 ರಿಂದ 150 ಕೋಟಿ ರೂ.ಸಾಲ ಪಡೆದಿದ್ದಾರೆ.
ಕೆಲವು ನೇಕಾರರಿಗೆ ಸಾಲ ಪಡೆಯಲು ಬೇಕಾದ ಅರ್ಹತೆ ಇಲ್ಲದಿರುವುದರಿಂದ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಸರ್ಕಾರ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡಿ ಋಣ ಮುಕ್ತರನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಶೇ. 85 ರಷ್ಟು ನೇಕಾರರು ಕೂಲಿ ಕಾರ್ಮಿಕರಾಗಿದ್ದು, ನೇಕಾರರನ್ನೂ ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗೆ ದೊರೆಯುವ ಸವಲತ್ತುಗಳನ್ನು ನೀಡಿದರೆ ಕುಟುಂಬಗಳಿಗೆ ಅನುಕೂಲವಾಗಲಿದೆ. ಐದು ಎಚ್ಪಿವರೆಗೂ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಬೇಕು.
55 ವರ್ಷ ಮೀರಿದ ನೇಕಾರರಿಗೆ ಮಾಸಿಕ 5 ಸಾವಿರ ಮಾಸಾಶನ ನೀಡಬೇಕು. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ, ನೇಕಾರರ ಕುಟುಂಬಕ್ಕೆ ವಸತಿ ಸೌಲಭ್ಯ ಹಾಗೂ ಖಾದಿ ಬಟ್ಟೆಗಳ ಮೇಲೆ ಶೇ.30 ರಷ್ಟು ರಿಯಾಯಿತಿ ನೀಡಬೇಕು ಎಂದು ಕೋರಿದ್ದಾರೆ.