ಹಾಸನ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಕಿರುತೆರೆಯ ನಟ ಮಧು ಹೆಗಡೆಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಮಲೆನಾಡಿನ ಬೆಡಗಿ ನಮ್ರಾತಾರನ್ನು ವರಿಸುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಹಾಸನದ ಶಂಕರ ಮಠದಲ್ಲಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಸಕಲೇಶಪುರದ ಲಕ್ಷ್ಮೀಪುರ ಬಡಾವಣೆ ವಾಸುದೇವ ಶರ್ಮಾರ ಪುತ್ರಿ ನಮ್ರತಾರನ್ನು ವರಿಸಿದ್ದಾರೆ. ಕಿರುತೆರೆಯ ನಟನಾಗಿರುವ ಮಧು ಹೆಗಡೆ ಪಲ್ಲವಿ ಅನುಪಲ್ಲವಿ, ಮನ್ವಂತರ, ಜೋಗುಳ, ಗೆಜ್ಜೆಪೂಜೆ ಸೇರಿದಂತೆ 50ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಮಧು ಹೆಗಡೆ ಹಾಗೂ ಸಕಲೇಶಪುರ ಮೂಲದ ನಮ್ರತಾ ಕುಟುಂಬ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದು, ಶಾರದಾಂಬೆ ಸನ್ನಿಧಿಯಲ್ಲಿ ಹಿಂದೂ ಸಂಪ್ರದಾಯದಂತೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಂಪತಿ ನವಬಾಳಿಗೆ ಕಾಲಿಟ್ಟಿದ್ದಾರೆ. ವಿವಾಹಕ್ಕೆ ಕಿರುತೆರೆಯ ನಟ ನಟಿಯರ ದಂಡೇ ಆಗಮಿಸಿತ್ತು. ಚಲನಚಿತ್ರ ನಟ ಅರುಣ್ ಸಾಗರ್, ವಿಕ್ರಮ್ ಸೂರಿ, ನಮಿತಾ ರಾವ್ ದಯಾನಂದ್, ಸಾಗರ್ ಕೃಷ್ಣ ಅಡಿಗ, ನಂದಿನಿ ಗೌಡ, ಛಾಯಾಗ್ರಾಹಕ ಪ್ರಭಾಕರ್, ಚಿತ್ರ ನಿರ್ದೇಶಕ ಶ್ಯಾಮ್ ಶಿವಮೊಗ್ಗ, ಸಂಗೀತ, ಕಿರುತೆರೆ ನಿರ್ದೇಶಕರು ಸೇರಿದಂತೆ ನೂರಕ್ಕೂ ಅಧಿಕ ನಟ ನಟಿಯರು ಸೇರಿದ್ದರು.