ತಾಳಿಕೋಟೆ: ಜೀವನ ಕ್ರಮ ಹಾಗೂ ಆಹಾರ ಕ್ರಮಗಳು ಸಂತುಲಿತವಾಗಿದ್ದರೆ ಉತ್ತಮ ಆರೋಗ್ಯ ಕಾಯ್ದುಕೊಂಡು ಹೆಚ್ಚು ಕಾಲ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಮುದ್ದೇಬಿಹಾಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣ ಸುಣಕಲ್ಲ ಹೇಳಿದರು.
ಅವರು ತಾಲೂಕಿನ ಬ.ಸಾಲವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಲಸ್ವಾಸ್ಥ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಶಿಕ್ಷಣ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಋತುಮಾನಕ್ಕೆ ತಕ್ಕಂತೆ ದೊರೆಯುವ ಹಣ್ಣುಗಳನ್ನು ಸೇವಿಸಬೇಕು. ಸಮತೋಲಿತ ಆಹಾರವೆಂದರೆ ದೇಹದ ಚೈತನ್ಯ, ಉತ್ಸಾಹವನ್ನು ಹೆಚ್ಚಿಸಿ ನಮ್ಮ ದೈಹಿಕ ಕ್ಷಮತೆಯನ್ನು ಹೆಚ್ಚಿಸಬೇಕು. ಬೆಳಗಿನಿಂದ ಸಂಜೆಯವರೆಗೆ ನಾವು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಬೆಳಗ್ಗೆ ಹೆಚ್ಚು, ಮಧ್ಯಾಹ್ನ ಕಡಿಮೆ ಹಾಗೂ ಸಂಜೆಗೆ ಇನ್ನೂ ಕಡಿಮೆ ಆಹಾರ ಸೇವಿಸಬೇಕು. ಆದರೆ ಈಗ ಹೆಚ್ಚಿನವರು ಇದನ್ನು ವಿರುದ್ಧವಾಗಿ ಅನುಸರಿಸುತ್ತಿದ್ದಾರೆ. ಅದು ಅನಾರೋಗ್ಯಕ್ಕೆ ದಾರಿಯಾಗುತ್ತಿದೆ. ಬೇಕರಿ ತಿನಿಸುಗಳಲ್ಲಿ ಮೈದಾ ಹಾಗೂ ಸೋಡಾ ಬಳಕೆ ಹೆಚ್ಚು ಅವು ಬಾಯಿಗೆ ರುಚಿ ಕೊಟ್ಟರೂ ದೇಹಾರೋಗ್ಯಕ್ಕೆ ತೊಂದರೆ ನೀಡುತ್ತವೆ. ಆದ್ದರಿಂದ ಜೀವಸತ್ವ ಹೆಚ್ಚಿರುವ ಇರುವ ಸಿರಿಧಾನ್ಯಗಳು, ತರಕಾರಿ, ಬೇಳೆ ಕಾಳುಗಳಂತಹ ಸತ್ವಯುತ ಆಹಾರ ಸೇವಿಸಿ ಎಂದು ಸಲಹೆ ನೀಡಿದರು.