ಚಿಕ್ಕಬಳ್ಳಾಪುರ, ಡಿ. 9 : ಕುಮಾರಸ್ವಾಮಿಯವರು ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ರಾಜ್ಯದ ಜನತೆಗೆ ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.
ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಸೋಲಿಗೆ ಫಲಿತಾಂಶವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ರೈತರ ಸಾಲಮನ್ನಾ ಮಾಡಿದ ಕುಮಾರಸ್ವಾಮಿಯನ್ನು ಜನ ಕೈ ಹಿಡಿಯಲಿಲ್ಲ.ಉಪಚುನಾವಣೆಯ ಫಲಿತಾಂಶ ನಾವು ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶ ನೋಡಿ ಮನಸ್ಸಿಗೆ ತುಂಬಾ ದುಃಖ ಆಗುತ್ತೆ. ನಮ್ಮ ತಂದೆ ಕುಮಾರಣ್ಣ 38 ಸ್ಥಾನ ಪಡೆದು ಸಿಎಂ ಆಗಿದ್ದರು. ಬಹುಮತ ಇಲ್ಲದಿದ್ರೂ ಹೇಳಿದ ಹಾಗೆ ಅವರು ರೈತರ ಸಾಲಮನ್ನಾ ಮಾಡಿದ್ದರು. ರೈತರ ಸಾಲಮನ್ನಾ ಮಾಡುವ ಕಾಯಕ ಮಾಡಿ ಉಪಚುನಾವಣೆಗೆ ಬಂದೆವು. ಆದರೆ ರಾಜ್ಯದ ಜನರು ಕುಮಾರಣ್ಣನ ಕೈ ಹಿಡಿಯಲಿಲ್ಲ ಎಂದರು.
ಮಾಜಿ ಸಿಎಂಗೆ ಕೈ ಬಿಟ್ಟ ಜನ :
ಉಪಚುನಾವಣೆಯ ಫಲಿತಾಂಶ ಕಂಡು ಕುಮಾರಣ್ಣ ತುಂಬಾ ನೋವುಪಟ್ಟುಕೊಂಡರು. ಕೆ.ಆರ್ ಪೇಟೆ ಜನ ಸಹ ನಮ್ಮನ್ನು ಕೈ ಬಿಟ್ಟರು ಯಾಕೆ ಎಂದು ಗೊತ್ತಿಲ್ಲ? ರಾಜ್ಯದ ಜನತೆಗೆ ನಮ್ಮ ತಂದೆ ಏನು ಅನ್ಯಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಇಂದು ಕುಮಾರಣ್ಣನ ಆರೋಗ್ಯ ಸ್ಥಿತಿ ಹೇಳಲು ಇಷ್ಟಪಡಲ್ಲ. ಏಕೆಂದರೆ ಕನಿಕರ ಪಡೆದು ಮತ ಹಾಕಿಸಿಕೊಳ್ಳುವ ನೀಚರೂ ನಾವಲ್ಲ. ಹಾಗಾಗಿ ಕಾರ್ಯಕ್ರಮ ಬೇಗ ಮುಗಿಸಲು ಅಗುತ್ತಾ ಎಂದು ಆಗಲೇ ಕೇಳಿದೆ. ಏಕೆಂದರೆ ನಮ್ಮ ತಂದೆ ಒಬ್ಬರೇ ಮನೆಯಲ್ಲಿದ್ದಾರೆ. ಮಗನಾಗಿ ನನ್ನ ತಂದೆ ಮೇಲೆ ನನಗೆ ಕಾಳಜಿ ಇದೆ. ಆದರೆ ನನ್ನ ಆರೋಗ್ಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.