ಮಂಗಳೂರು,ಡಿ. 06: ರಾಜ್ಯದಲ್ಲಿ ಕೆಲವುದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿರುವುದರಿಂದ ಸಮಸ್ಯೆಗೊಳಗಾದ ಹಮಾಲಿ ಕಾರ್ಮಿಕರು ಮಂಗಳೂರಿನ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವುದರಿಂದ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಈರುಳ್ಳಿ ಬೆಲೆ ಇಳಿಸಲು ವಿದೇಶದಿಂದ ಈರುಳ್ಳಿ ಆಮದಾದರೂ ಬೆಲೆ ಇಳಿಕೆಯಾಗಿಲ್ಲ. ಈರುಳ್ಳಿಯ ಬೆಲೆ ಇಳಿಸಲಾಗದೇ ಜನ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಸಾಂಕೇತಿಕವಾಗಿ ತೋರಿಸಲು ಮಂಗಳೂರಿನಲ್ಲಿ ಈ ವಿಶಿಷ್ಟ ಪ್ರತಿಭಟನೆ ನಡೆಯಿತು. ಹಳೆ ಬಂದರಿನಲ್ಲಿ ಶ್ರಮಿಕರ ಸಂಘ ನೇಣು ಹಗ್ಗ ಪ್ರದರ್ಶಿಸಿ ಈ ವಿಶಿಷ್ಟ ಪ್ರತಿಭಟನೆ ನಡೆಸಿತು. ಈರುಳ್ಳಿ ವ್ಯಾಪಾರ ಕಡಿಮೆಯಾಗಿರುವುದರಿಂದ ಬಂದರು ಹಮಾಲಿ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ. ಕೆಲಸ ಕಡಿಮೆಯಾಗಿರುವುದರಿಂದ ತಮಗೆ ನೇಣೇ ಗತಿ ಎಂಬ ಸಂದೇಶವನ್ನು ಈ ಪ್ರತಿಭಟನೆ ಮೂಲಕ ಸರಕಾರಕ್ಕೆ ರವಾನಿಸಿದರು.