ಬೆಂಗಳೂರು:ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ರಾಜ್ಯದಲ್ಲಿ ಸುಮಾರು ೩ರಿಂದ ೪ ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವ ಮುನ್ನ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.
ರಾಜ್ಯದ ೫-೬ ಜಿಲ್ಲೆಗಳಲ್ಲಿ ಮಳೆಯಿಂದ ಭಾರೀ ಹಾನಿಯಾಗಿದೆ. ಈ ಬಗ್ಗೆ ೩ರಿಂದ ೪ ಸಾವಿರ ಕೋಟಿ ರೂ. ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿ ವರದಿ ಕೇಳಿದ್ದು, ಸಮಗ್ರ ವರದಿ ಬಂದ ನಂತರ ಪ್ರಧಾನಿಗಳಿಗೆ ನೆರೆ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.
ಭಾರೀ ಮಳೆಯಿಂದ ರಾಜ್ಯದಲ್ಲಿ ೮೦ ಸಾವಿರ ಎಕರೆ ಬೆಳೆ ನಷ್ಟ ಉಂಟಾಗಿದೆ. ನೆರೆಯಿಂದ ಎಷ್ಟು ನಷ್ಟವಾಗಿದೆ. ಅಷ್ಟೂ ಮೊತ್ತದ ಪರಿಹಾರವನ್ನು ಕೇಂದ್ರದ ಬಳಿ ಕೇಳಲಾಗುವುದು. ಅವರು ಎಷ್ಟು ಕೊಡುತ್ತಾರೆ ಎಂಬುದನ್ನು ನೋಡಬೇಕು ಎಂದು ಅಶೋಕ್ ಹೇಳಿದರು.