ಬೆಂಗಳೂರು, ಡಿ. 27: ಇತಿಹಾಸ ಪ್ರಸಿದ್ಧ ಪುರಾತನ ಹಲಸೂರು ಕೆರೆ ಮತ್ತೆ ನಳನಳಿಸುತ್ತಿದ್ದು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಹಲಸೂರು ಕೆರೆಯಲ್ಲಿ ಜೊಂಡು ಬೆಳೆದು ಜನರಿಗೆ ವಾಯುವಿಹಾರ ಮಾಡಲು ತೀವ್ರ ತೊಂದರೆಯಾಗಿತ್ತು. ಎಚ್ಚೆತ್ತುಕೊಂಡ ಬಿಬಿಎಂಪಿ ಹಾಗೂ ಮಾಜಿ ಸೈನಿಕರ ನೆರವಿನಲ್ಲಿ ಸ್ವಚ್ಛತೆಗೆ ಮುಂದಾಯಿತು.
113 ಎಕರೆ ಪ್ರದೇಶದ ಹಲಸೂರು ಕೆರೆಯನ್ನು 30 ಮಾರ್ಷಲ್ಗಳು ಹಾಗೂ 70 ಎಂಇಜಿ ಸೆಂಟರ್ ಸೈನಿಕರು ಕಳೆದ ನಾಲ್ಕು ದಿನಗಳಿಂದ 6 ಬೋಟ್ಗಳ ಸಹಯೋಗದಲ್ಲಿ ಕೆರೆಯಲ್ಲಿ ಬೆಳೆದಿರುವ ಕಳೆ, ಪ್ಲಾಸ್ಟಿಕ್, ಥರ್ಮಾಕೋಲ್ ಶೀಟ್ ಸೇರಿದಂತೆ 25 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಿದರು. ಇಂದು ಪಾಲಿಕೆ ಆಯುಕ್ತ ಅನಿಲ್ಕುಮಾರ್ ಬೋಟ್ ಮೂಲಕ ಕೆರೆ ಸ್ವಚ್ಛತೆ ಮಾಡಿರುವುದನ್ನು ಪರಿಶೀಲನೆ ನಡೆಸಿ, ಕೆರೆಯನ್ನು ಸುಂದವಾಗಿಸಿರುವ ಎಂಇಜಿ ಸೈನಿಕರು ಹಾಗೂ ಮಾರ್ಷಲ್ ಗಳನ್ನು ಶ್ಲಾಘಿಸಿದರು.
ಪೂರ್ವ ವಲಯದ 6 ವಿಭಾಗದ 150 ಪಾಲಿಕೆ ಸಿಬ್ಬಂದಿಗಳು, ಲಾರಿ, ಟ್ರ್ಯಾಕ್ಟರ್ಗಳು ಹಾಗೂ ಅವಶ್ಯಕ ಸಲಕರಣೆಗಳೊಂದಿಗೆ ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.
ಕೆರೆಯ ಅಂಗಳದ ಸುತ್ತ ಬೆಳೆದಿರುವ ಗಿಡ, ಕಳೆಯನ್ನು ತೆಗೆದು ಸಾರ್ವಜನಿಕರ ಸುಗಮ ವಾಯುವಿಹಾರಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ.
ನಗರದ ಹಲಸೂರು, ಕೆಂಪಾಬುದಿ ಕೆರೆ ಸ್ಯಾಂಕಿ ರಸ್ತೆಗೆ ಸುಮಾರು ವರ್ಷಗಳ ಇತಿಹಾಸವಿದೆ. ಇಂತಹ ಅಮೂಲ್ಯ ಕೆರೆಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಈ ವೇಳೆ ಕೆರೆ ಸಂರಕ್ಷಣಾ ವಿಭಾಗದ ಮುಖ್ಯ ಅಭಿಯಂತರ ಮೋಹನ್ ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.