ಕುಣಿಗಲ್, ಡಿ. 2 : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊತ್ತಗೆರೆ ನಿವಾಸಿ ವೆಂಕಟೇಶ್ (25), ಆದಿಲ್ ಪಾಷಾ (20) ಮೃತ ಪಟ್ಟ ಯುವಕರು. ಇವರಿಬ್ಬರು ರಾತ್ರಿ ವೇಳೆ ಕೆರೆಗಳಲ್ಲಿ ಕದ್ದು ಮೀನು ಹಿಡಿದು ಮಾರಾಟ ಮಾಡುತ್ತಿದ್ದರು. ಎಂದಿನಿಂತೆ ಮಧ್ಯ ರಾತ್ರಿ ಕುಡಿದು ದೊಡ್ಡ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ.ರಾತ್ರಿ ಕೆರೆ ಪಕ್ಕದಲ್ಲಿ ಬ್ಯಾಟರಿ ಹಾಗೂ ತೆಪ್ಪ ಮಗುಚಿಬಿದ್ದಿರುವುದನ್ನು ಕಂಡ ಸಾರ್ವಜನಿಕರು ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಹಾಗೂ ಈಜುಪಟುಗಳು ಭೇಟಿ ನೀಡಿ ಪರಿಶೀಲಿಸಿದಾಗ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.