ಬೆಂಗಳೂರು : ನಾನು ಈ ವರ್ಷವನ್ನು ಸಕಾರಾತ್ಮಕ ವಿಚಾರಗಳೊಂದಿಗೆ ಬರಮಾಡಿಕೊಂಡಿದ್ದೇನೆ, ಈ ವರ್ಷ ವಿಭಿನ್ನ ಸಿನಿಮಾಗಳನ್ನು ಮಾಡಬೇಕೆಂದುಕೊಂಡಿದ್ದೇನೆ. ಇದೇ ನಿಟ್ಟಿನಲ್ಲಿ 2021ರ ಮೊದಲ ಸಿನಿಮಾ ಕರ್ವ 3 ಒಪ್ಪಿಕೊಂಡಿದ್ದೇನೆ ಎಂದು ಮುಂದಿನ ತಮ್ಮ ಯೋಜನೆಗಳ ಬಗ್ಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮಾತನಾಡಿದರು.
ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಸೆರೆವಾಸ ಅನುಭವಿಸಿ ಬಂದ ಬಳಿಕ ಮೊದಲ ಬಾರಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಸಾಕಷ್ಟು ವಿಚಾರಗಳ ಬಗ್ಗೆ ಯೋಜನೆಗಳು ನಡೆಯುತ್ತಿವೆ. ಈ ವರ್ಷ ವಿಭಿನ್ನ ಸಿನಿಮಾಗಳನ್ನು ಮಾಡಬೇಕೆಂದುಕೊಂಡಿದ್ದೇನೆ. ಅದೇ ರೀತಿ ಕಥೆಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.
ಅಲ್ಲದೇ ಈಗ ಅಪ್ಪ ಅಮ್ಮನನ್ನು ನೋಡಿಕೊಳ್ಳುವುದು ತುಂಬಾನೇ ಮುಖ್ಯ. ಸಣ್ಣ, ಸಣ್ಣ ವಿಚಾರಗಳಲ್ಲಿ ನಾವು ಖುಷಿ ಕಾಣಬೇಕು. 2020ರಲ್ಲಿ ಎಲ್ಲರೂ ನೊಂದಿದ್ದಾರೆ. ದುಡ್ಡು, ಹೆಸರು ಇದ್ದರೂ ಯಾವುದೂ ಶಾಶ್ವತ ಅಲ್ಲ ಎನ್ನುವುದನ್ನು 2020 ಸಾಬೀತು ಮಾಡಿದೆ ಎಂದು ರಾಗಿಣಿ ಕೊರೋನಾ ದಿನಗಳನ್ನು ನೆನೆದರು.
ನನಗೆ ಚಿತ್ರರಂಗದಿಂದ ಭಾರೀ ಬೆಮಬಲ ಸಿಗುತ್ತಿದೆ. ಇದನ್ನು ಕಂಡು ಬಹಳ ಸಂತಸವಾಗುತ್ತಿದೆ. ಒಂದಷ್ಟು ಜನ ಮನೆಗೆ ಬಂದು ನನ್ನ ಆರೋಗ್ಯ ವಿಚಾರಿಸಿದ್ದಾರೆ. ಅವರ ಮನಸಲ್ಲಿ ನಾನು ಇದ್ದೇನೆ ಎನ್ನುವುದೇ ಖುಷಿ ನನಗೆ. ಡ್ರಗ್ ಕೇಸ್ ಬಗ್ಗೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಗಿಣಿ ಏನು ಎಂಬುದು ಎಲ್ಲರಿಗೂ ಗೊತ್ತು. ನಾನು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೇಸ್ ಬಗ್ಗೆ ಮಾತನಾಡಲು ಇಷ್ಟವೂ ಇಲ್ಲ ಎಂದರು.