ಕಲಬುರಗಿ : ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಸಂಪತ್ ಎಂಬ 18 ರ್ಷದ ಯುವಕ, ನದಿಗೆ ಈಜಲು ಹೋಗುತ್ತಿದ್ದ ಯುವಕನೋರ್ವ, ಅಚಾನಕ್ಕಾಗಿ ಸುಳಿಗೆ ಸಿಲುಕಿ ಜಲಸಮಾಧಿಯಾದ ಘಟನೆ ಕಲಬುರ್ಗಿ ಜಿಲ್ಲೆಯ ಕಾಗಿಣಾ ನದಿಯಲ್ಲಿ ನಡೆದಿದೆ.
ಕೊರೋನಾ ಸೋಂಕಿನ ಕಾರಣದಿಂದಾಗಿ ದೇಶದ ಬಹುತೇಕ ಕಡೆ ಶಾಲಾ-ಕಾಲೇಜುಗಳಿಗೆ ರಜೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ತನ್ನ ಗೆಳೆಯರೊಂದಿಗೆ ಈಜಲು ಕಾಗಿಣಾ ನದಿಗೆ ಹೋಗಿದ್ದ ಯುವಕ. ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರಿಗೆ ಧುಮುಕ್ಕಿದ್ದ ಯುವಕ, ದುರದೃಷ್ಟವಶಾತ್ ಸುಳಿಗೆ ಸಿಲುಕಿ ಹೊರಬರಲಾಗದೆ ಸಾವನ್ನಪ್ಪಿದ್ದಾನೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಈಜು ಬರುತ್ತಿದ್ದರು ನೀರಿನ ರಭಸದಲ್ಲಿ ಸುಳಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ.
ಯುವಕನ ಸಾವಿನ ಸುದ್ದಿ ಹಿನ್ನೆಲೆಯಲ್ಲಿ ಮೃತನ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟುವಂತೆ ಮಾಡಿತ್ತು. ವಯಸ್ಸಿಗೆ ಬಂದ ಮಗ ನಡು ನೀರಲ್ಲೇ ಕೈ ಬಿಟ್ಟು ಹೋದ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.