ಕುಣಿಗಲ್: ಪಾದಚಾರಿ ಮಾರ್ಗದ ಅವ್ಯವಸ್ಥೆಯಿಂದಾಗಿ ಸಂಚರಿಸಲಾಗದೆ ಖಾಸಗಿ ಬಸ್ ರಸ್ತೆಬದಿ ನಿಂತಿದ್ದ ದ್ವಿಚಕ್ರವಾಹನಗಳ ಮೇಲೆ ಹರಿದು ಪಟ್ಟಣದ ಗ್ರಾಮದೇವತಾ ವೃತ್ತದಲ್ಲಿ ಒಂದು ಗಂಟೆ ಸಂಚಾರಕ್ಕೆ ತೊಂದರೆಯಾಗಿ ನಾಗರಿಕರು ಪರದಾಡಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಪುರಸಭೆ ಬಸ್ ನಿಲ್ದಾಣದಿಂದ ತುಮಕೂರಿಗೆ ಹೋಗುತ್ತಿದ್ದ ಬಸ್ ಹಕೀಂ ಷಾ ವಾಲಿ ಕಾಂಪ್ಲೆಕ್ಸ್ ಬಳಿ ತಿರುವಿನ ಬಳಿ ಬಂದಾಗ ರಸ್ತೆಯ ಒಂದು ಬದಿಯಲ್ಲಿ ಕಾರುಗಳು ನಿಂತ್ತಿದ್ದು, ಅಡ್ಡಲಾಗಿ ಬಂದ ದ್ವಿಚಕ್ರ ವಾಹನ ಸವಾರನನ್ನು ಪಾರು ಮಾಡಲು ಯತ್ನಿಸುವ ಪ್ರಯತ್ನದಲ್ಲಿ ಬಸ್ ಚಾಲಕ ರಸ್ತೆಯ ಮತ್ತೊಂದು ಬದಿಯಲ್ಲಿ ಸಾಲಾಗಿ ನಿಂತಿದ್ದ ದ್ವಿಚಕ್ರವಾಹನಗಳ ಮೇಲೆ ಹರಿದಿದೆ. 15ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.
ಘಟನೆಯಿಂದಾಗಿ ವಾಹನ ಮಾಲೀಕರು ಆತಂಕಗೊಂಡು, ಚಾಲಕನ ಮೇಲೆ ಹರಿಹಾಯ್ದಿದ್ದಾರೆ. ವಾಹನಗಳನ್ನು ತೆರವು ಮಾಡಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಮಕೂರು, ಬೆಂಗಳೂರು ಮತ್ತು ಮೈಸೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಕೇಂದ್ರ ಬಿಂದುವಾಗಿದ್ದ ಗ್ರಾಮದೇವತಾ ವೃತ್ತದಲ್ಲಿ ಸುಮಾರು ಒಂದುಗಂಟೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ನಂತರ ಪೊಲೀಸರು ಬಂದು ಜಖಂಗೊಂಡಿದ್ದ ವಾಹನ ಮತ್ತು ಬಸ್ ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.