ಬೆಂಗಳೂರು, ಜ. 27 : ನಗರದ ಎಸ್ಬಿಐ ಬ್ಯಾಂಕ್ನ ಎಟಿಎಂ ಯಂತ್ರವನ್ನು ಒಡೆದು ಹಣವನ್ನು ಬ್ಯಾಗ್ನಲ್ಲಿ ತುಂಬಿಕೊಂಡು ಇನ್ನೇನು ಪರಾರಿಯಾಗಬೇಕೆನ್ನುವಷ್ಟರಲ್ಲಿ ಇಬ್ಬರು ದರೋಡೆಕೋರರು ಬ್ಯಾಟರಾಯನಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪಂಜಾಬ್ ಮೂಲದ ಹರ್ಷ ಅರೋರಾ ಮತ್ತು ಸುರ್ಬಿತ್ ಬಂಧಿತ ದರೋಡೆಕೋರರು. ಮೈಸೂರು ರಸ್ತೆಯ ಬಿಎಚ್ಇಎಲ್ ಎದುರು ಎಸ್ಬಿಐ ಬ್ಯಾಂಕ್ ಎಟಿಎಂ ಕೇಂದ್ರವಿದೆ. ಇಂದು ಬೆಳಗಿನ ಜಾವ 1.30ರ ಸುಮಾರಿನಲ್ಲಿ ಇಬ್ಬರು ದರೋಡೆಕೋರರು ಎಟಿಎಂ ಯಂತ್ರವನ್ನು ರಾಡಿನಿಂದ ಮೀಟಿ, ಗ್ಯಾಸ್ ಕಟರ್ನಿಂದ ಕತ್ತರಿಸಿ ಸುಮಾರು 15 ಲಕ್ಷ ರೂಗಳಿಗೂ ಹೆಚ್ಚು ಹಣವನ್ನು ಬ್ಯಾಗ್ನಲ್ಲಿ ತುಂಬಿಕೊಂಡಿದ್ದಾರೆ.
ಅಷ್ಟೊತ್ತಿಗೆ ಬ್ಯಾಂಕ್ನಲ್ಲಿ ಅಲಾರಂ ಒಡೆದುಕೊಂಡಿದೆ. ತಕ್ಷಣ ಬ್ಯಾಂಕ್ ಮ್ಯಾನೇಜರ್ ಪೊಲೀಸ್ ಕಂಟ್ರೋಲ್ರೂಂಗೆ ಮಾಹಿತಿ ನೀಡಿದ್ದಾರೆ. ಕ್ಷಣಾರ್ಧದಲ್ಲಿ ಹೊಯ್ಸಳ ಪೊಲೀಸರು ಹಾಗೂ ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ದರೋಡೆಕೋರರನ್ನು ಸುತ್ತುವರೆದಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ರಾಡ್ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ತಕ್ಷಣ ಇಬ್ಬರು ದರೋಡೆಕೋರರನ್ನು ಬಂಧಿಸಿ, ಗ್ಯಾಸ್ ಕಟರ್ ಹಾಗೂ ರಾಡ್ನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.