ತುಮಕೂರು, ಡಿ. 3: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿ ಜಿಲ್ಲೆಯ ರೈತರಿಗೆ ಎದುರಾಗಿದೆ. ಲಕ್ಷಾಂತರ ರೈತರು ಕಷ್ಟಪಟ್ಟು ರಾಗಿ ಬಿತ್ತನೆ ಮಾಡಿದ್ದು, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಸುಳಿಗಾಳಿ ತುಮಕೂರಿಗೂ ವ್ಯಾಪಿಸಿದ್ದು, ರಾಗಿ ಬೆಳೆ ನೆಲ ಕಚ್ಚುವ ಆತಂಕ ಶುರುವಾಗಿದೆ. ನಿನ್ನೆ ರಾತ್ರಿಯಿಂದಲೇ ಜಿಲ್ಲೆಯ ವಿವಿದೆಡೆ ಮಳೆಯಾಗಿದ್ದು, ಕಟಾವು ಹಂತದಲ್ಲಿದ್ದ ರಾಗಿ ನೆಲಕ್ಕುರುಳಿದೆ.
ಮಳೆಯಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲೇ ಬೆಳೆದ ರಾಗಿ, ಜೋಳ, ಶೇಂಗಾ ಮತ್ತಿತರ ಧಾನ್ಯಗಳು ಕೈಸೇರುವ ಮುನ್ನವೇ ನೆಲ ಕಚ್ಚುತ್ತಿವೆ.
ಈ ಬಾರಿ ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಕೈ ಸೇರುವುದೆಂಬ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಕಾರ್ಮೋಡ ಆವರಿಸಿದೆ. ಮಂದಹಾಸ ಮೂಡಬೇಕಿದ್ದ ರೈತರ ಮುಖದಲ್ಲಿ ದುಃಖದ ಛಾಯೆ ಆವರಿಸಿದೆ.