ಇಂದು ಮಂಗಳೂರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ

ಇಂದು ಮಂಗಳೂರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ

ಬೆಂಗಳೂರು: ಪಕ್ಷ ಸಂಘಟನೆ ಸೇರಿ ಪರಿವಾರ ಸಂಘಟನೆಗಳ ಪ್ರಮುಖರೊಂದಿಗೆ ವಿವಿಧ ವಿಚಾರ ಕುರಿತು ಮಹತ್ವದ ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬುಧವಾರದಿಂದ ಎರಡು ದಿನ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ. ಸಂಘ ಪರಿವಾರ ಸೇರಿ ನಾನಾ ಸಂಘಟನೆಗಳ ದಕ್ಷಿಣ ಭಾರತ ರಾಜ್ಯಗಳ ಪ್ರಮುಖರ ಸಭೆ ಬುಧವಾರ ಹಾಗೂ ಗುರುವಾರ ಮಂಗಳೂರಿನಲ್ಲಿ ನಡೆಯಲಿದ್ದು, ಅದರಲ್ಲಿ ಶಾ ಪಾಲ್ಗೊಳ್ಳಲಿದ್ದಾರೆ.

ಬುಧವಾರ ಸಂಜೆ 4 ಗಂಟೆಗೆ ಮಂಗಳೂರಿಗೆ ತೆರಳಿ, ಸಂಜೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಮಜನ್ಮ ಭೂಮಿ ವಿಚಾರ,
ಶಬರಿಮಲೆಗೆ ಮಹಿಳಾ ಪ್ರವೇಶ ಅವಕಾಶ ಸೇರಿ ಇತರ ಪ್ರಮುಖ ವಿಚಾರಗಳ ಬಗ್ಗೆಯೂ ಈ ವೇಳೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌, ವಿಶ್ವ ಹಿಂದೂ ಪರಿಷತ್‌ ಸೇರಿ ಸಂಘ ಪರಿವಾರದ ನಾನಾ ಸಂಘಟನೆಗಳ ಕರ್ನಾಟಕ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿಯ ಪ್ರತಿನಿಧಿಗಳು ಸೇರಿದಂತೆ ನಿರ್ದಿಷ್ಟ ಜವಾಬ್ದಾರಿ
ಹೊತ್ತಿರುವ ಆಯ್ದ ಪ್ರಮುಖರಷ್ಟೇ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಸಂಘಟನೆಗಳು ಮುಂದಿನ ಒಂದೆರಡು ವರ್ಷಗಳಲ್ಲಿ ನಡೆಸಬೇಕಾದ ಹೋರಾಟ, ಪ್ರಚುರಪಡಿಸಬೇಕಾದ ವಿಚಾರ, ಇತರ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ
ನಡೆಸಲಾಗುವುದು. ಸದ್ಯದಲ್ಲೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯೂ ಎದುರಾಗಲಿರುವುದರಿಂದ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos