ನವದೆಹಲಿ, ಜ.07: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ನಾಳಿನ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ 25 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು ಕಾರ್ಮಿಕ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಕಾರ್ಮಿಕ ಸಂಘಗಳು ಐಎನ್ಟಿಯುಸಿ, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಸೆವಾ, ಎಐಸಿಸಿಟಿಯು, ಎಲ್ಪಿಎಫ್, ಯುಟಿಯುಸಿ ಜೊತೆಗೆ ವಿವಿಧ ವಲಯದ ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳು ನಾಳೆ ಮುಷ್ಕರ ನಡೆಸುವ ಬಗ್ಗೆ ಕಳೆದ ಸೆಪ್ಟೆಂಬರ್ನಲ್ಲೇ ತೀರ್ಮಾನ ಮಾಡಿದ್ದವು.
ಕಾರ್ಮಿಕ ವಿರೋಧಿ, ಜನ ವಿರೋಧಿ, ರಾಷ್ಟ್ರ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಇಂತಹ ಅನೇಕ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ನಾಯಕರು ಹೇಳಿದ್ದಾರೆ.
“ಕಾರ್ಮಿಕ ಸಚಿವಾಲಯವು ಜನವರಿ 2, 2020 ರಂದು ಸಭೆ ಕರೆದರೂ ಕಾರ್ಮಿಕರ ಯಾವುದೇ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದೂ ನಾಯಕರು ದೂರಿದ್ದಾರೆ .
ಹೆಚ್ಚಿದ ಶುಲ್ಕ ಮತ್ತು ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಧ್ವನಿ ಎತ್ತುವ ಕಾರ್ಯಸೂಚಿಯೊಂದಿಗೆ ಸುಮಾರು 60 ವಿದ್ಯಾರ್ಥಿ ಸಂಘಟನೆಗಳು ಸಹ ನಾಳಿನ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ.